ಬೆಂಗಳೂರು: ಹಾಲಿ ಲೋಕಸಭಾ ಚುನಾವಣೆ ಹಲವು ವಿಚಾರಗಳಿಂದಾಗಿ ಭಾರಿ ಸದ್ದು ಮಾಡುತ್ತಿದ್ದು, ಈ ಪೈಕಿ ನಟರಾದ ಸಮಲತಾ ಅಂಬರೀಶ್ ಹಾಗೂ ನಟ ಪ್ರಕಾಶ್ ರೈ ಅವರ ಸ್ಪರ್ಧೆ ಕೂಡ ಪ್ರಮುಖವಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸುಮಲತಾ ಅಂಬರೀಶ್ ಪಕ್ಷೇತರರಾಗಿ ಕಣಕ್ಕಿಳಿದಿದ್ದರೆ, ಇನ್ನೊಂದೆಡೆ ಪ್ರಕಾಶ್ ರೈ ಬೆಂಗಳೂರು ಕೇಂದ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಈ ಇಬ್ಬರ ಪೈಕಿ ಯಾರೇ ಗೆದ್ದರೂ ಇತಿಹಾಸ ಸೃಷ್ಟಿಯಾಗಲಿದೆ.
ಪ್ರಕಾಶ್ ರೈ ಅಥವಾ ಸುಮಲತಾ ಈ ಬಾರಿಯ ಚುನಾವಣೆಯಲ್ಲಿ ಗೆದ್ದರೆ 52 ವರ್ಷಗಳ ನಂತರ ಪಕ್ಷೇತರ ಅಭ್ಯರ್ಥಿಯೊಬ್ಬರು ರಾಜ್ಯದಿಂದ ಸಂಸತ್ ಗೆ ಪ್ರವೇಶಿಸಿದಂತಾಗುತ್ತದೆ. 1967ರಲ್ಲಿ ದಿನಕರ್ ದೇಸಾಯಿ ಪಕ್ಷೇತರರಾಗಿ ನಿಂತು ರಾಜ್ಯದಿಂದ ಸಂಸತ್ ಪ್ರವೇಶಿಸಿದ್ದರು. ಅವರ ನಂತರ ಇದುವರೆಗೂ ಯಾವೊಬ್ಬ ಪಕ್ಷೇತರ ಅಭ್ಯರ್ಥಿ ಕೂಡ ಲೋಕಸಭಾ ಚುನಾವಣೆಯಲ್ಲಿ ಗೆದ್ದಿಲ್ಲ. ದಿನಕರ್ ದೇಸಾಯಿಗೂ ಮೊದಲು 1957ರಲ್ಲಿ ಸುಗಂಧಿ ಮುರುಗಪ್ಪ ಸಿದ್ದಪ್ಪ ಬಿಜಾಪುರ ಉತ್ತರ ಕ್ಷೇತ್ರದಿಂದ ಪಕ್ಷೇತರರಾಗಿ ನಿಂತು ಲೋಕಸಭೆ ಪ್ರವೇಶಿಸಿದ್ದರು.
1951ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಿಂದ 2014 ರ ಲೋಕಸಭಾ ಚುನಾವಣೆ ತನಕ ಕರ್ನಾಟಕದಲ್ಲಿ ಒಟ್ಟು 2,337 ಅಭ್ಯರ್ಥಿಗಳು ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos