ಮಂಡ್ಯ: ಲೋಕಸಭಾ ಚುನಾವಣೆ ಮುಗಿದಿದ್ದು, ಫಲಿತಾಂಶ ಹೊರಬೀಳುವ ಮುನ್ನವೇ ನಿಖಿಲ್ ಕುಮಾರಸ್ವಾಮಿ ಸಂಸದರಾಗಿದ್ದಾರೆ ? ಹೌದು ಇಂತಹ ವಿಚಿತ್ರವೊಂದು ಶ್ರೀರಂಗಪಟ್ಟಣದ ಜೆಡಿಎಸ್ ಹಾಗೂ ನಿಖಿಲ್ ಅಭಿಮಾನಿಯ "ಲಗ್ನಪತ್ರಿಕೆ" ಈ ಎಡವಟ್ಟು ಬೆಳಕಿಗೆ ಬಂದಿದೆ.
ಶ್ರೀರಂಗಪಟ್ಟಣದ ಟಿಎಪಿಎಸಿ ಕಲ್ಯಾಣ ಮಂಟಪದಲ್ಲಿ ಮೇಳಾಪುರದ ಎಂ.ಎನ್.ಅಶೋಕ್ಕುಮಾರ್ ಹಾಗೂ ಅಭಿಲಾಷ ಅವರ ಮದುವೆ ಜೂ.6ರಂದು ನಡೆಯಲಿದೆ. ವಿವಾಹ ಆಹ್ವಾನ ಪತ್ರಿಕೆಯ ಒಂದು ಪುಟದಲ್ಲಿ ನಿಖಿಲ್ ಕುಮಾರ ಸ್ವಾಮಿ ಫೋಟೋ ಹಾಕಿ ಕೆಳಭಾಗದಲ್ಲಿ ವಿಶೇಷ ಆಹ್ವಾನಿತರು ಜೆಡಿಎಸ್ ಯುವ ಸಾರಥಿ, ನಿಖಿಲ್ ಕುಮಾರಸ್ವಾಮಿ, ಮಂಡ್ಯ, ಸಂಸದರು ಎಂದು ಮುದ್ರಿಸಲಾಗಿದೆ...!
ವಿವಾಹ ಆಹ್ವಾನ ಪತ್ರಿಕೆ ಎಲ್ಲಡೆ ಭಾರಿ ವೈರಲ್ ಆಗಿದ್ದು ಚುನಾವಣಾ ಫಲಿತಾಂಶ ಪ್ರಕಟವಾಗುವ ಮೊದಲೇ.. ನಿಖಿಲ್ ಕುಮಾರಸ್ವಾಮಿಗೆ ಸಂಸದ ಸ್ಥಾನವನ್ನು ನೀಡುವ ಮೂಲಕ ಬೆಂಬಲಿಗರು ಅಭಿಮಾನ ಮೆರೆದಿದ್ದಾರೆ..!
ಈ ಹಿಂದೆ ನಿಖಿಲ್ ಅವರ ಅಭಿಮಾನಿಯೊಬ್ಬ ಚುನಾವಣೆ ಮುಗಿಯುತ್ತಿದ್ದಂತೆ ನಿಖಿಲ್ ಅವರನ್ನು ಸಂಸದರು ಎಂದು ನಮೂದಿಸಿದ ನಾಮಫಲಕವನ್ನು ತಮ್ಮ ಫೇಸ್ಬುಕ್ನಲ್ಲಿ ಶೇರ್ ಮಾಡಿಕೊಂಡಿದ್ದರು. ಹಾಗೇ ಜೆಡಿಎಸ್ ಅಂದಾಭಿಮಾನಿಯೊಬ್ಬ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಪ್ರಜ್ವಲ್ ರೇವಣ್ಣನವರ ಹೆಸರು ಹಾಕಿ, ಅದರ ಮುಂದೆ ಲೋಕಸಭಾ ಸಂಸದರು ಎಂದು ನಮೂದಿಸಿದ್ದ ಫೋಟೋ ಸಹ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಅಭಿಮಾನಿಗಳ ಈ ಹುಚ್ಚು ಅಭಿಮಾನ, ನಾಯಕರನ್ನು ಸಂತೋಷಗೊಳಿಸುತ್ತದೆ. ಆದರೆ ರಾಜಕೀಯ ನಾಯಕರು ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ತೀವ್ರ ಟೀಕೆಗೆ ಒಳಗಾಗಿ ಪೇಚಿಗೆ ಸಿಲುಕುವಂತಾಗಿದೆ.