ಬೆಂಗಳೂರು: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇದ್ದು ಈ ನಡುವೆ ಆರ್ ಬಿಐ ಬಡ್ಡಿ ದರವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ.
ಆರ್ ಬಿಐ ರೆಪೋ ದರ ಕಡಿತಗೊಳಿಸುವುದಕ್ಕೆ ಸಂಬಂಧಿಸಿದಂತೆ ರಾಯ್ಟರ್ಸ್ ಸುದ್ದಿ ಸಂಸ್ಥೆ ಅಭಿಪ್ರಾಯ ಸಂಗ್ರಹಣೆ ಮಾಡಿದೆ.
ಆರ್ ಬಿಐ ಗೌರ್ನರ್ ಶಕ್ತಿಕಾಂತ್ ದಾಸ್ ಫೆಬ್ರವರಿ ತಿಂಗಳಲ್ಲಿ ಬಡ್ಡಿ ದರಗಳನ್ನು ಕಡಿತಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಈಗಲೂ ಸಹ ಆರ್ ಬಿಐ ಬಡ್ಡಿ ದರವನ್ನು ಕಡಿತಗೊಳಿಸಲಿದೆ ಎಂಬ ನಿರೀಕ್ಷೆ ಇದೆ. ಬೆಳವಣಿಗೆ ದರ ಹಾಗೂ ಹಣದುಬ್ಬರದ ದೃಷ್ಟಿಯಲ್ಲಿ ಬಡ್ಡಿ ದರ ಇಳಿಕೆ ಮಾಡಿರುವುದನ್ನು ಆರ್ ಬಿಐ ಈ ಹಿಂದೆ ಸಮರ್ಥಿಸಿಕೊಂಡಿತ್ತು.
ಈಗ ಎರಡನೇ ತ್ರೈಮಾಸಿಕದ್ಲಲಿ ಏಪ್ರಿಲ್ ಹಾಗೂ ಜೂನ್ ನಲ್ಲಿ ಆರ್ ಬಿಐ ನ ಎರಡು ಸಭೆ ನಡೆಯಲಿದ್ದು, ಬಡ್ಡಿ ದರ ಇಳಿಕೆ ಮಾಡಿ ನೀತಿಗಳನ್ನು ಸಡಿಲಗೊಳಿಸಲು ಆರ್ ಬಿಐ ಮೇಲೆ ಸರ್ಕಾರದ ಒತ್ತಡ ಇದೆ. ಈ ಒತ್ತಡದ ಹಿನ್ನೆಲೆಯಲ್ಲಿ ಆರ್ ಬಿಐ ಬಡ್ಡಿ ದರ ಕಡಿತಗೊಳಿಸಬೇಕಾದರೆ ಜೂನ್ ಅಥವಾ ಏಪ್ರಿಲ್ ನಲ್ಲಿ ಕಡಿತಗೊಳಿಸಬೇಕು, ಜೂನ್ ಬದಲಿಗೆ ಏಪ್ರಿಲ್ ನಲ್ಲೇ ಆರ್ ಬಿಐ ಬಡ್ಡಿ ದರವನ್ನು ಕಡಿಮೆ ಮಾಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಆರ್ ಬಿಐ ಬಡ್ಡಿ ದರ ಕಡಿಮೆ ಮಾಡಿದರೆ ನಿಸಂಶಯವಾಗಿ ಅದರ ಕೀರ್ತಿಯನ್ನು ಸರ್ಕಾರ ಪಡೆಯಲಿದೆ. ಇನ್ನು ಅರ್ಥಶಾಸ್ತ್ರಜ್ಞರು ಚುನಾವಣೆಯ ಬಗ್ಗೆಯೂ ರಾಯ್ಟರ್ಸ್ ಸುದ್ದಿ ಸಂಸ್ಥೆಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಬಿಜೆಪಿ ಪೂರ್ಣ ಬಹುಮತ ಅಥವಾ ಬಿಜೆಪಿ ನೇತೃತ್ವದ ಎನ್ ಡಿಎ ಅಧಿಕಾರಕ್ಕೆ ಬಂದರೆ ದೇಶದ ಆರ್ಥಿಕತೆಗೆ ಅತ್ಯುತ್ತಮವಾದದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ.