ಛಾಯಾಗ್ರಾಹಕನ ಮೇಲೆ ಕಾಂಗ್ರೆಸ್ ಕಾರ್ಯಕರ್ತರ ಹಲ್ಲೆ
ವಿರುಧುನಗರ್: ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಹಾಕಲಾಗಿದ್ದ ಖಾಲಿ ಕುರ್ಚಿಗಳ ಪೋಟೋ ತೆಗೆಯುತ್ತಿದ್ದ ಪತ್ರಿಕಾ ಛಾಯಾಗ್ರಾಹಕನ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನ ವಿರುಧುನಗರ ಜಿಲ್ಲೆಯಲ್ಲಿ ಶನಿವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಮಾವೇಶದ ವೇಳೆ ಈ ಘಟನೆ ನಡೆದಿದ್ದು, ಸಮಾವೇಶದಲ್ಲಿ ಖಾಲಿ ಕುರ್ಚಿಗಳ ಫೋಟೊ ತೆಗೆದ ಅಲ್ಲಿನ ವಾರ ಪತ್ರಿಕೆಯೊಂದರ ಛಾಯಾಗ್ರಾಹಕನ ಮೇಲೆ ಕೈ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ.
ಮೂಲಗಳ ಪ್ರಕಾರ ಈ ಸಮಾವೇಶದ ಅಧ್ಯಕ್ಷತೆಯನ್ನು ತಮಿಳುನಾಡು ಪ್ರದೇಶ ಕಾಂಗ್ರೆಸ್ ನ ಅಧ್ಯಕ್ಷ ಕೆ.ಎಸ್. ಅಳಗಿರಿ ವಹಿಸಿಕೊಂಡಿದ್ದರು. ಈ ಸಮಾವೇಶದಲ್ಲಿ ಖಾಲಿ ಕುರ್ಚಿಗಳಿರುವ ಕಡೆ ಛಾಯಾಗ್ರಾಹಕ ಆರ್.ಎಂ ಮುತ್ತುರಾಜ್ ಅವರು ಚಿತ್ರ ಸೆರೆ ಹಿಡಿಯುತ್ತಿದ್ದರು. ಆಗ ಕಾಂಗ್ರೆಸ್ ಕಾರ್ಯಕರ್ತರು ಆತನ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೆ, ಮುತ್ತುರಾಜ್ ಅವರ ಕ್ಯಾಮೆರಾ ಕಸಿಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಅಲ್ಲೇ ಇದ್ದ ಕೆಲ ಪತ್ರಕರ್ತರು ಮಧ್ಯಪ್ರವೇಶ ಮಾಡಿ ಮುತ್ತುರಾಜ್ ಅವರಿಗೆ ನೆರವಾಗಿದ್ದಾರೆ. ಘಟನೆ ನಂತರ ಛಾಯಾಗ್ರಾಹಕ ಮುತ್ತುರಾಜ್ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಬೆಳವಣಿಗೆ ಖಂಡಿಸಿರುವ ಬಿಜೆಪಿ, ‘ಕಾಂಗ್ರೆಸ್ನದ್ದು ಗೂಂಡಾ ಸಂಸ್ಕೃತಿ,’ ಎಂದು ಟೀಕಿಸಿದೆ.
ಇನ್ನು ಈ ದೃಶ್ಯಾವಳಿ ಸದ್ಯ ತಮಿಳುನಾಡಿನಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos