ಔಸಾ: ಪಾಕಿಸ್ತಾನದ ರಚನೆಗೆ ಕಾಂಗ್ರೆಸ್ ಹೊಣೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಚುನಾವಣಾ ಸಮಾವೇಶದಲ್ಲಿ ಯುವಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಿಮ್ಮ ಮೊದಲ ಮತವನ್ನು ಬಾಲಾಕೋಟ್ ನಲ್ಲಿ ಉಗ್ರರ ನೆಲೆ ಮೇಲೆ ವೈಮಾನಿಕ ದಾಳಿ ನಡೆಸಿದ ಹಿರೋಗಳಿಗೆ ಅರ್ಪಿಸಿ ಎಂದು ಕರೆ ನೀಡಿದ್ದಾರೆ.
ವೈಮಾನಿಕ ದಾಳಿ ನಡೆಸಿದವರಿಗೆ ನಿಮ್ಮ ಮತ ಅರ್ಪಣೆಯಾಗಬಹುದೇ? ಎಂದು ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಯುವ ಜನತೆಯನ್ನು ಕೇಳಿದ್ದಾರೆ.
ಸ್ವಾತಂತ್ರ್ಯಾ ಪೂರ್ವದಲ್ಲಿ ಕಾಂಗ್ರೆಸ್ ನಾಯಕರು ವಿವೇಕದಿಂದ ವರ್ತಿಸಿದ್ದರೆ ಈ ಪಾಕಿಸ್ತಾನ ಹುಟ್ಟುತ್ತಿರಲಿಲ್ಲ, ಈಗ ಪಾಕಿಸ್ತಾನದ ಭಾಷೆಯನ್ನೇ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯೂ ಮಾತನಾಡುತ್ತಿದೆ, ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಬೇಕೆನ್ನುವವರೊಂದಿಗೆ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷ ಎನ್ ಸಿಪಿ ನಿಂತಿದೆ ಎಂದು ಮೋದಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ಬಿಜೆಪಿ ಸಾಧನೆಗಳ ಬಗ್ಗೆಯೂ ಮೋದಿ ಮಾತನಾಡಿದ್ದು, ಬಿಜೆಪಿ ಅಧಿಕಾರಾವಧಿಯಲ್ಲಿನ ನವ ಭಾರತ ಭಯೋತ್ಪಾದಕರನ್ನು ಅವರ ನೆಲದಲ್ಲೇ ಹೊಡೆದುರುಳಿಸುವ ತಾಕತ್ತು ಪ್ರದರ್ಶಿಸಿದೆ ಎಂದು ಹೇಳಿದ್ದಾರೆ.