ದೇಶ

ರಾಹುಲ್ ಗಾಂಧಿ ನಿವಾಸದಿಂದ ಚುನಾವಣೆ ಹಗರಣ, ಜನರ ಹಣವನ್ನು ಲೂಟಿ: ಪ್ರಧಾನಿ ಮೋದಿ

Sumana Upadhyaya
ಜುನಗಢ್(ಗುಜರಾತ್): ಕಾಂಗ್ರೆಸ್ ತುಘಲಕ್ ರಸ್ತೆ ಚುನಾವಣಾ ಹಗರಣ ನಡೆಯುತ್ತಿದ್ದು ಬಡವರು, ದೀನರು, ಗರ್ಭಿಣಿಯರಿಗೆ ಮೀಸಲಿಟ್ಟ ಹಣವನ್ನು ಜನರಿಂದ ಲೂಟಿ ಮಾಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಪ್ರಧಾನಿಯವರಿಂದ ಗುಜರಾತ್ ನ ಜುನಗಢ್ ನಲ್ಲಿ ಬಿಜೆಪಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಹಗರಣದ ವಿಚಾರಕ್ಕೆ ಬಂದರೆ ಕಾಂಗ್ರೆಸ್ ಜೊತೆ ಹಲವು ಹೆಸರುಗಳಿವೆ. ಇದೀಗ ಹೊಸ ಹೆಸರು ಅದಕ್ಕೆ ಸಾಕ್ಷಿ ಸಮೇತ ಸೇರ್ಪಡೆಯಾಗಿದೆ.ಅದು ತುಘಲಕ್ ರಸ್ತೆ ಚುನಾವಣೆ ಹಗರಣ, ಇಲ್ಲಿ ಬಡವರ ಉದ್ದಾರಕ್ಕೆ ಮೀಸಲಿಟ್ಟ ಹಣವನ್ನು ಅವರೇ ತಮ್ಮ ಸ್ವಂತ ಉದ್ದಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ.
ಗರ್ಭಿಣಿಯರ ಸೌಲಭ್ಯ, ಆರೋಗ್ಯಕ್ಕೆ ಮೀಸಲಿಟ್ಟ ಹಣವನ್ನು ಲೂಟಿ ಮಾಡಲಾಗುತ್ತಿದೆ ಎಂದರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಅಧಿಕೃತ ನಿವಾಸ ಇರುವುದು ದೆಹಲಿಯ ತುಘಲಕ್ ರಸ್ತೆಯಲ್ಲಿ.
ಅಪರಾಧ ಮಾಡಿದವರಿಗೆ ಕೂಡ ಜಾಮೀನು ಸಿಗಬೇಕೆಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳುತ್ತದೆ. ಈ ಸೌಲಭ್ಯ ಯಾರಿಗಾಗಿ, ನಿಮ್ಮದೇ ಪಕ್ಷದ ನಾಯಕರಿಗಾಗಿಯೇ? ಕಳೆದ 5 ವರ್ಷಗಳಲ್ಲಿ ಕಳಂಕಿತರನ್ನು ನಾನು ಜೈಲಿಗೆ ಬಾಗಿಲಿಗೆ ಕರೆತಂದಿದ್ದೇನೆ, ಇನ್ನು 5 ವರ್ಷ ಅಧಿಕಾರ ಕೊಟ್ಟರೆ ಅವರೆಲ್ಲ ಜೈಲಿನೊಳಗೆ ಇರುತ್ತಾರೆ ಎಂದರು.
ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಸಹಚರರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಕ್ಕೆ ಟೀಕಿಸಿದ ಪ್ರಧಾನಿ, ಕರ್ನಾಟಕ ರಾಜ್ಯದ ಬಳಿಕ ಮಧ್ಯ ಪ್ರದೇಶ ಕಾಂಗ್ರೆಸ್ ಗೆ ಹೊಸ ಎಟಿಎಂ ಆಗಿದೆ. ರಾಜಸ್ತಾನ, ಛತ್ತೀಸ್ ಗಢಗಳಲ್ಲಿ ಕೂಡ ಪರಿಸ್ಥಿತಿ ಭಿನ್ನವಾಗಿಲ್ಲ. ಜನರನ್ನು ಲೂಟಿ ಮಾಡಲು ಅಧಿಕಾರಕ್ಕೆ ಬರುವಲ್ಲಿ ಮಾತ್ರ ಕಾಂಗ್ರೆಸ್ ಆಸಕ್ತಿ ಹೊಂದಿದೆ ಎಂದರು.
ಪಾಕಿಸ್ತಾನದ ವಿರುದ್ಧ ವಾಯುದಾಳಿ ನಡೆಸಿದಾಗ ಅದು ಭಾರತದಲ್ಲಿ ಪ್ರತಿಪಕ್ಷದ ಮೇಲೆ ಪರಿಣಾಮ ಬೀರಿತು. ದೇಶ ಭದ್ರವಾಗಿದ್ದರೆ ಮಾತ್ರ ಸಮೃದ್ಧಿ ಹೊಂದಲು ಸಾಧ್ಯ. ಮೋದಿ ದೇಶದಿಂದ ಭಯೋತ್ಪಾದನೆಯನ್ನು ಹೋಗಲಾಡಿಸಲು ಯತ್ನಿಸಿದರೆ ವಿರೋಧ ಪಕ್ಷಗಳು ಮೋದಿಯನ್ನೇ ಅಧಿಕಾರದಿಂದ ಕಿತ್ತೊಗೆಯಲು ಯತ್ನಿಸುತ್ತಿವೆ. ನಿಮ್ಮ ಮಗ, ಚೌಕಿದಾರನನ್ನು ನಿಂದಿಸಲು ಕಾಂಗ್ರೆಸ್ ನವರಲ್ಲಿ ಯಾವ ಪದ ಕೂಡ ಉಳಿದಿಲ್ಲ ಎಂದರು.
ಭಾರತದಿಂದ ಜಮ್ಮು-ಕಾಶ್ಮೀರವನ್ನು ಪ್ರತ್ಯೇಕಿಸಲು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನ ಮಂತ್ರಿಯನ್ನು ಬಯಸುವವರನ್ನು ಕಾಂಗ್ರೆಸ್ ಬೆಂಬಲಿಸುತ್ತಿದೆ ಎಂದು ಕೂಡ ಮೋದಿ ಆರೋಪಿಸಿದರು.
ದೇಶದ ಸಾಮಾನ್ಯ ಜನರ ರಕ್ಷಣೆಗೆ ನಮ್ಮ ಯೋಧರು ಪ್ರಾಣತೆತ್ತರು. ದೇಶಕ್ಕಾಗಿ ಪ್ರಾಣ ಕಳೆದುಕೊಳ್ಳದ ಯಾವ ರಾಜ್ಯವೂ ಭಾರತದಲ್ಲಿ ಉಳಿದಿಲ್ಲ ಎಂದರು.
SCROLL FOR NEXT