ಅಹ್ಮದ್ ನಗರ(ಮಹಾರಾಷ್ಟ್ರ): ಇಮಾಂದಾರ್ ಚೌಕಿದಾರ್ ಮತ್ತು ಭ್ರಷ್ಟಾಚಾರಿ ನಾಮ್ದಾರ್ ಮಧ್ಯೆ ಯಾರು ಬೇಕೆಂದು ಜನರೇ ತೀರ್ಮಾನಿಸಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಟಾಂಗ್ ಕೊಟ್ಟಿದ್ದಾರೆ.
ಅವರು ಇಂದು ಅಹ್ಮದ್ ನಗರ್ ಮತ್ತು ಶಿರಡಿ ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಪರವಾಗಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿ, ಕಳೆದ 5 ವರ್ಷಗಳಲ್ಲಿ ಭಾರತ ದೇಶ ವಿಶ್ವದಲ್ಲಿ ಸೂಪರ್ ಪವರ್ ದೇಶವಾಗಿ ಗುರುತಿಸಿಕೊಂಡಿದೆ. ಹಿಂದಿನ 10 ವರ್ಷಗಳ ರಿಮೋಟ್ ಕಂಟ್ರೋಲ್ ಸರ್ಕಾರ ನಿಮಗೆ ನೆನಪಿದೆಯೇ? ಹಗರಣಗಳಿಂದ ತುಂಬಿ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಕೂಡ ಹಿಂದಿನ ಸರ್ಕಾರ ವಿಳಂಬ ಮಾಡುತ್ತಿತ್ತು ಎಂದು ಯುಪಿಎ ಸರ್ಕಾರವನ್ನು ಆರೋಪಿಸಿದರು.
ಎಂದಿನಂತೆ ಮೊದಲ ಬಾರಿ ಮತ ಚಲಾಯಿಸುವ ಯುವಜನತೆಯನ್ನು ಕೂಡ ಉದ್ದೇಶಿಸಿ ಮಾತನಾಡಿದ ಮೋದಿ, ದೇಶದ ಭದ್ರತೆ ವಿಚಾರದಲ್ಲಿ ಹಿಂದಿನ ಸರ್ಕಾರ ರಾಜಿ ಮಾಡಿಕೊಂಡಿತ್ತು. ಅದನ್ನು ನೀವು ಒಪ್ಪುತ್ತೀರಾ? ಎಂದು ಕೇಳಿದರು.