ಕೋಲ್ಕತಾ: ಹಾಲಿ ಲೋಕಸಭಾ ಚುನಾವಣೆ ನಿಮಿತ್ತ ಇಂದು 4ನೇ ಹಂತದ ಮತದಾನ ನಡೆಯುತ್ತಿದ್ದು, ಅತ್ತ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿಯಾಗಿದ್ದು, ಆಸನೋಲ್ ಬಿಜೆಪಿ ಅಭ್ಯರ್ಥಿ ಬಬುಲ್ ಸುಪ್ರೀಯೋ ಅವರ ಕಾರನ್ನು ಜಖಂ ಮಾಡಲಾಗಿದೆ.
ಇಂದು ದೇಶಾದ್ಯಂತ 4ನೇ ಹಂತದ ಮತದಾನ ನಡೆಯುತ್ತಿದ್ದು, ಪಶ್ಚಿಮ ಬಂಗಾಳವೂ ಸೇರಿದಂತೆ 9 ರಾಜ್ಯಗಳ 72 ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದೆ. ಈ ಪೈಕಿ ಪಶ್ಚಿಮ ಬಂಗಾಳದ ಅಸನೋಲ್ ಕ್ಷೇತ್ರದಲ್ಲಿ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಸಂಘರ್ಷ ಸಂಭವಿಸಿದೆ. ಈ ವೇಳೆ ಟಿಎಂಸಿ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಬಬುಲ್ ಸುಪ್ರಿಯೋ ಅವರ ಕಾರಿನ ಮೇಲೆ ಟಿಎಂಸಿ ಕಾರ್ಯಕರ್ತರು ದಾಳಿ ನಡೆಸಿ ಜಖಂಗೊಳಿಸಿದ್ದಾರೆ.
ಕ್ಷೇತ್ರದ ಮತಗಟ್ಟೆ ಸಂಖ್ಯೆ 199ರಲ್ಲಿ ಟಿಎಂಸಿ ಮತ್ತು ಸಿಆರ್ ಪಿಎಫ್ ಸಿಬ್ಬಂದಿ ನಡುವೆ ಘರ್ಷಣೆ ಸಂಭವಿಸಿದ್ದು, 125 ಮತ್ತು129ನೇ ಮತಗಟ್ಟೆಗಳಲ್ಲಿ ಬಿಜೆಪಿ, ಸಿಪಿಎಂ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆಯಿತು. ಭದ್ರತಾ ಸಿಬ್ಬಂದಿ ಇರದೇ ಇದ್ದರೂ ಮತದಾನ ಪ್ರಕ್ರಿಯೆ ಆರಂಭವಾಗಬೇಕು ಎಂದು ಟಿಎಂಸಿ ಕಾರ್ಯಕರ್ತರು ಆಗ್ರಹಿಸಿದ್ದರಿಂದ ಈ ಗಲಾಟೆ ಆರಂಭವಾಯಿತು. ಭದ್ರತೆಯೊಂದಿಗೇ ಮತದಾನ ಆರಂಭವಾಗಬೇಕು ಎಂದು ಸಿಪಿಎಂ ಮತ್ತು ಬಿಜೆಪಿ ಕಾರ್ಯಕರ್ತರು ಪಟ್ಟು ಹಿಡಿದರು. ಈ ವೇಳೆ ಕಾರ್ಯಕರ್ತರ ನಡುವೆ ಮಾರಾಮಾರಿಯಾಗಿದ್ದು, ಘಟನೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಯೋಧರು ಮತ್ತು ಸೈನಿಕರು ಲಾಠಿ ಚಾರ್ಜ್ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು.
ಘಟನೆ ಕುರಿತು ಮಾತನಾಡಿರುವ ಬಿಜೆಪಿ ಅಭ್ಯರ್ಥಿ ಬಬುಲ್ ಸುಪ್ರಿಯೋ, 'ಟಿಎಂಸಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ. ನಾನು ಕ್ಷೇತ್ರದಲ್ಲಿ ಓಡಾಡದೇ ಇರದಂತೆ ಮಾಡಲು, ಒಂದೇ ಕಡೆಗೆ ಸೀಮಿತವಾಗುವಂತೆ ಮಾಡಲು ಟಿಎಂಸಿ ನನ್ನ ವಿರುದ್ಧ ಹೀಗೆಲ್ಲ ಮಾಡುತ್ತಿದೆ. ಈ ಕ್ಷೇತ್ರದಲ್ಲಿ ಮತಗಟ್ಟೆಗಳ ಎದುರು ಇರುವ ಮನೆಗಳ ನಿವಾಸಿಗಳೂ ಹೊರಗೆ ಬಂದು ಮತ ಹಾಕದಂತಾ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos