ಲಕ್ನೊ: ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಮತಗಟ್ಟೆಯನ್ನು ಕಾಂಗ್ರೆಸ್ ಕಾರ್ಯಕರ್ತರು ವಶೀಕರಣ ಮಾಡಿದ್ದಾರೆ ಎಂದು ಕೇಂದ್ರ ಸಚಿವೆ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಮಾಡಿರುವ ಆರೋಪ ಸುಳ್ಳು ಎಂದು ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿ ಲಕ್ಕು ವೆಂಕಟೇಶ್ವರಲು ಹೇಳಿದ್ದಾರೆ.
ಅವರು ನಿನ್ನೆ ಲಕ್ನೊದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮತಗಟ್ಟೆಯನ್ನು ಕಾಂಗ್ರೆಸ್ ಕಾರ್ಯಕರ್ತರು ವಶೀಕರಣ ಮಾಡಿದ್ದಾರೆ ಎಂದು ಹಿರಿಯ ಮಹಿಳೆಯೊಬ್ಬರು ಆರೋಪಿಸಿದ್ದಾರೆ ಎನ್ನಲಾದ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ವಿಡಿಯೊ ಕ್ಲಿಪ್ ಆಧಾರರಹಿತ ಎಂದಿದ್ದಾರೆ.
ಸ್ಮೃತಿ ಇರಾನಿಯವರು ದೂರು ನೀಡಿದ ನಂತರ ಚುನಾವಣಾ ಆಯೋಗದ ವಲಯ ಅಧಿಕಾರಿ, ಹಿರಿಯ ಅಧಿಕಾರಿಗಳು ಮತ್ತು ವಿಚಕ್ಷಣಾಕಾರರು ಮತಗಟ್ಟೆಗಳಿಗೆ ತೆರಳಿ ರಾಜಕೀಯ ಪಕ್ಷಗಳ ಚುನಾವಣಾ ಏಜೆಂಟರ್ ಮತ್ತು ಮತಗಟ್ಟೆಗಳ ಅಧಿಕಾರಿಗಳ ಬಳಿ ಮಾತನಾಡಿಸಿದ್ದಾರೆ. ವಿಡಿಯೊ ಕ್ಲಿಪ್ ನಲ್ಲಿ ಮಹಿಳೆ ಸತ್ಯಕ್ಕೆ ದೂರವಾದ ಆಧಾರರಹಿತ ಆರೋಪಗಳನ್ನು ಹೊರಿಸುತ್ತಿದ್ದಾರೆ. ವಿಡಿಯೊದಲ್ಲಿ ಮಾಡಿರುವ ಆರೋಪಗಳ ಮೇಲ್ನೋಟದ ಮೇಲೆ ಚುನಾವಣೆಯ ಮತಗಟ್ಟೆ ಅಧಿಕಾರಿಯನ್ನು ವಜಾಗೊಳಿಸಲಾಗಿದ್ದು ತನಿಖೆ ಮುಂದುವರಿದಿದೆ ಎಂದರು.
ಅಮೇಥಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ ಪರವಾಗಿ ಮತಗಟ್ಟೆಗಳನ್ನು ವಶೀಕರಣ ಮಾಡಿಕೊಳ್ಳಲಾಗಿದೆ ಎಂದು ಸ್ಮೃತಿ ಇರಾನಿ ಆರೋಪಿಸಿದ ನಂತರ ಹರಿದಾಡಿದ ವಿಡಿಯೊ ಕ್ಲಿಪ್ ನಿಂದ ವ್ಯಾಪಕ ವಿವಾದ ಸೃಷ್ಟಿಯಾಗಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos