ಕೊಲ್ಕತಾ: ಕಲ್ಲಿದ್ದಲು ಮಾಫಿಯಾ ಜೊತೆ ತೃಣಮೂಲ ಕಾಂಗ್ರೆಸ್ ನಂಟು ಹೊಂದಿದೆ ಎಂಬ ನಿಮ್ಮ ಆರೋಪವನ್ನು ಸಾಬೀತುಪಡಿಸಿ. ಇಲ್ಲವೆ ಸಾರ್ವಜನಿಕವಾಗಿ ಉಟ್ ಬಸ್ಕಿ ಹೊಡೆಯುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗುರುವಾರ ಸವಾಲು ಹಾಕಿದ್ದಾರೆ.
ತಮ್ಮ ಪಕ್ಷದ ಅಭ್ಯರ್ಥಿಯೊಬ್ಬರ ವಿರುದ್ಧ ಪ್ರಧಾನಿ ಮೋದಿ ಮಾಡಿದ ಆರೋಪಕ್ಕೆ ಮಮತಾ ಬ್ಯಾನರ್ಜಿ ಅವರು ಇಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಆರೋಪ ಸಾಬೀತು ಮಾಡುವಂತೆ ಮೋದಿ ಅವರಿಗೆ ಅವರು ಸವಾಲು ಹಾಕಿದ್ದಾರೆ. ಆರೋಪ ಸಾಬೀತು ಮಾಡಲು ಸಾಧ್ಯವಾಗದಿದ್ದರೆ ಕೈಗಳಿಂದ ಕಿವಿ ಹಿಡಿದುಕೊಂಡು 100 ಉಟ್ ಬೈಸ್ಕಿ ಹೊಡೆಯುವಂತೆಯೂ ಪ್ರಧಾನಿಗೆ ಸವಾಲು ಹಾಕಿದ್ದಾರೆ.
ಒಂದು ವೇಳೆ ಪ್ರಧಾನಿ ಮೋದಿ ಆರೋಪ ಸಾಬೀತುಪಡಿಸಿದೆ ತಾವು ಪಶ್ಚಿಮ ಬಂಗಾಳದ 42 ಲೋಕಸಭಾ ಕ್ಷೇತ್ರಗಳ ಟಿಎಂಸಿ ಅಭ್ಯರ್ಥಿಗಳನ್ನು ಹಿಂಪಡೆಯುವುದಾಗಿ ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಕಲ್ಲಿದ್ದಲು ಲೂಟಿ ಆರೋಪ ಮಾಡಿದ್ದ ಪ್ರಧಾನಿ ಮೋದಿ, ಕಲ್ಲಿದ್ದಲು ಗಣಿಗಳಲ್ಲಿ ತೃಣಮೂಲ ಕಾಂಗ್ರೆಸ್ನ ಮಾಫಿಯಾ ರಾಜ್ ನಡೆಯುತ್ತಿರುವುದು ನಿಮಗೆ ಚೆನ್ನಾಗಿ ಗೊತ್ತಿದೆ. ಗಣಿ ಕಾರ್ಮಿಕರು ಕೂಲಿ ಹಣವನ್ನು ಟಿಎಂಸಿ ಮುಖಂಡರು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.