ದೇಶ

ಲೋಕ ಸಮರ: 6ನೇ ಹಂತದ ಮತದಾನ, ಕಣದಲ್ಲಿ ಘಟಾನುಘಟಿ ನಾಯಕರು

Srinivasamurthy VN
ನವದೆಹಲಿ: ಹಾಲಿ ಲೋಕಸಭಾ ಚುನಾವಣೆ ನಿಮಿತ್ತ ಇಂದು ನಡೆಯುತ್ತಿರುವ 6ನೇ ಹಂತದ ಮತದಾನದಲ್ಲಿ ಘಟಾನುಘಟಿ ನಾಯಕರು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ದೇಶದ ಏಳು ರಾಜ್ಯಗಳ ಒಟ್ಟು 59 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದ್ದು, ಉತ್ತರ ಪ್ರದೇಶದಲ್ಲಿನ 14 ಕ್ಷೇತ್ರ, ಹರಿಯಾಣದ 10 ಕ್ಷೇತ್ರ, ಪಶ್ಚಿಮ ಬಂಗಾಳ, ಬಿಹಾರ, ಮಧ್ಯ ಪ್ರದೇಶದ ತಲಾ 8 ಕ್ಷೇತ್ರ, ದೆಹಲಿಯ 7ಕ್ಷೇತ್ರ, ಮತ್ತು ಜಾರ್ಖಂಡ್‌ ನ 4 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.
ಪ್ರಸ್ತುತ ಇಡೀ ದೇಶದ ಕಣ್ಣು ದೇಶದ ರಾಜಧಾನಿ ಮೇಲೆ ನೆಟ್ಟಿದೆ. ದೆಹಲಿಯಲ್ಲಿ ಒಟ್ಟು 7 ಲೋಕಸಭಾ ಕ್ಷೇತ್ರಗಳಿದ್ದು, ಕಾಂಗ್ರೆಸ್​, ಆಪ್​​ ಮತ್ತು ಬಿಜೆಪಿ ಪಕ್ಷಗಳು ಪ್ರತ್ಯೇಕವಾಗಿ ಚುನಾವಣೆ ಎದುರಿಸುತ್ತಿವೆ. ಗೌತಮ್ ಗಂಭೀರ್, ಶೀಲಾ ದೀಕ್ಷಿತ್, ಬಾಕ್ಸರ್ ವಿಜಯೇಂದರ್ ಸಿಂಗ್, ಕೇಂದ್ರ ಮಂತ್ರಿ ಹರ್ಷ ವರ್ಧನ್, ಎಎಪಿಯ ಆತಿಶಿ ಇನ್ನೂ ಹಲವರು ಕಣದಲ್ಲಿದ್ದಾರೆ. 
ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಮತ್ತು ಮನೇಕಾ ಗಾಂಧಿ ಸೇರಿದಂತೆ ಪ್ರಮುಖರು ಕಣದಲ್ಲಿದ್ದು, ಮಧ್ಯಪ್ರದೇಶದ ಭೂಪಾಲ್​​ ನಲ್ಲಿ ಸಾದ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ದಿಗ್ವಿಜಯ್ ಸಿಂಗ್ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು, ಜತೆಗೆ ಜ್ಯೋತಿರಾದಿತ್ಯ ಸಿಂಧ್ಯಾ, ಕೇಂದ್ರ ಮಂತ್ರಿ ನರೇಂದ್ರ ಸಿಂಗ್ ತೋಮರ್ ಅವರುಗಳ ಭವಿಷ್ಯವೂ ಇಂದೇ ನಿರ್ಧಾರವಾಗಲಿದೆ.
SCROLL FOR NEXT