ದೇಶ

ಮೋದಿಗೆ ಪ್ಯಾಂಟ್ ಹಾಕುವುದು ಹೇಗೆ ಎಂದು ಗೊತ್ತಿಲ್ಲದ ವಯಸ್ಸಿನಲ್ಲಿಯೇ ಕಾಂಗ್ರೆಸ್ ಪಕ್ಷ ಸೇನೆಯನ್ನು ಕಟ್ಟಿದೆ: ಕಮಲ್ ನಾಥ್

Sumana Upadhyaya
ರಾಟ್ಲಾಮ್(ಮಧ್ಯ ಪ್ರದೇಶ): ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ಯಾಂಟ್ ಧರಿಸುವುದು ಹೇಗೆ ಎಂದು ಗೊತ್ತಿಲ್ಲದ ವಯಸ್ಸಿನಲ್ಲಿಯೇ ಕಾಂಗ್ರೆಸ್ ಪಕ್ಷ ಸೇನಾಪಡೆಯನ್ನು ಕಟ್ಟಿದೆ ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಹೇಳಿಕೆ ನೀಡಿದ್ದಾರೆ.
ಮೋದಿಯವರು ರಾಷ್ಟ್ರದ ಭದ್ರತೆ ಬಗ್ಗೆ ಮಾತನಾಡುತ್ತಾರೆ. ಅವರಿಗೆ ನಾನು ಹೇಳುವುದಿಷ್ಟೆ, ನೀವು ಪ್ಯಾಂಟ್ ಹಾಕುವುದು ಹೇಗೆ ಎಂದು ಗೊತ್ತಿಲ್ಲದ ವಯಸ್ಸಿನಲ್ಲಿಯೇ ಪಂಡಿತ್ ಜವಹರಲಾಲ್ ನೆಹರೂ ಮತ್ತು ಇಂದಿರಾ ಗಾಂಧಿಯವರು ದೇಶದ ಸೇನಾಪಡೆಯನ್ನು ಕಟ್ಟಿದ್ದರು ಎಂದು ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುವಾಗ ಮೋದಿಯವರನ್ನು ಲೇವಡಿ ಮಾಡಿದರು.
ಬಿಜೆಪಿ ಆಡಳಿತದಡಿಯಲ್ಲಿ ಹಲವು ಭಯಾನಕ ಉಗ್ರಗಾಮಿ ದಾಳಿಗಳು ನಡೆದಿವೆ. 2002ರಲ್ಲಿ ಸಂಸತ್ತು ಮೇಲೆ ದಾಳಿಯಾದಾಗ ಮತ್ತು ಈ ವರ್ಷ ಪುಲ್ವಾಮಾ ಭಯೋತ್ಪಾದಕ ದಾಳಿ ನಡೆದ ಸಂದರ್ಭದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು ಎಂದರು.
ಇಂದು ಬೆಳಗ್ಗೆ ಇಲ್ಲಿಗೆ ರಾಟ್ಲಮ್ ಗೆ ಪ್ರಧಾನಿ ಮೋದಿ ಬಂದಿದ್ದರು ಎಂದು ನಾನು ಕೇಳಲ್ಪಟ್ಟೆ. ಐದು ವರ್ಷಗಳಿಂದ ಅವರು ಸುಳ್ಳು ಹೇಳುತ್ತಿದ್ದಾರೆ. ಇನ್ನು 140 ಗಂಟೆ ಉಳಿದಿದೆ. ಮೋದಿಯವರು ಬುಡಕಟ್ಟು ಜನಾಂಗದವರನ್ನು ರಕ್ಷಿಸುತ್ತೇನೆ ಎಂದದ್ದಾರೆ. ಆದರೆ ಅವರು ಕಳೆದ 5 ವರ್ಷಗಳಲ್ಲಿ ಏನು ಮಾಡಿದರು ಎಂದು ನಾನು ಅವರಿಗೆ ಕೇಳಬಯಸುತ್ತೇನೆ ಎಂದರು.
ರೈತರ ಸಾಲಮನ್ನಾ ವಿಷಯವನ್ನು ಪ್ರಸ್ತಾಪಿಸಿದ ಕಮಲ್ ನಾಥ್, ರೈತರ ಸಾಲಮನ್ನಾ ಮಾಡುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದರು. ನಾವು 21 ಲಕ್ಷ ರೈತರ ಸಾಲಮನ್ನಾ ಮಾಡಿದ್ದೇವೆ. ಚುನಾವಣಾ ನೀತಿ ಸಂಹಿತೆ ಹಿಂತೆಗೆದುಕೊಂಡ ನಂತರ ಪ್ರತಿ ರೈತರ ಸಾಲವನ್ನು ಮನ್ನಾ ಮಾಡುತ್ತೇವೆ ಎಂದರು.
SCROLL FOR NEXT