ದೇಶ

ಅಮಿತ್ ಶಾ ರ್ಯಾಲಿಯಲ್ಲಿ ಹಿಂಸಾಚಾರ: ಬಿಜೆಪಿ ಕಾರ್ಯಕರ್ತರಿಂದ ವಿದ್ಯಾಸಾಗರ್ ಪ್ರತಿಮೆ ಧ್ವಂಸ ಆರೋಪ, ಇಸಿಗೆ ಟಿಎಂಸಿ ದೂರು

Lingaraj Badiger
ನವದೆಹಲಿ: ಕೋಲ್ಕತಾದಲ್ಲಿ ಮಂಗಳವಾರ ನಡೆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ರೋಡ್ ಶೋ ವೇಳೆ ಆಡಳಿತರೂಢ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಭಾರಿ ಘರ್ಷಣೆ ಉಂಟಾಗಿದ್ದು, ಬೆಂಗಾಳಿ ಲೇಖಕ ಈಶ್ವರ್ ಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ.
ಅಮಿತ್ ಶಾ ರ್ಯಾಲಿ ವೇಳೆ ಹೊರಗಡೆಯಿಂದ ಕರೆತಂದಿದ್ದ ಬಿಜೆಪಿ ಕಾರ್ಯಕರ್ತರು ಬೈಕ್ ಗಳಿಗೆ ಬೆಂಕಿ ಹಚ್ಚಿ, ವಿದ್ಯಾಸಾಗರ್ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ ಎಂದು ಟಿಎಂಸಿ ಆರೋಪಿಸಿದ್ದು, ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಟ್ವೀಟ್ ಮಾಡಿದೆ.
ಡೆರೆಕ್ ಒ ಬ್ರೇಯಿನ್, ಸುಖೆಂದು ಶೇಖರ್ ರಾಯ್, ಮನಿಶ್ ಗುಪ್ತಾ ಅವರನ್ನೊಳಗೊಂಡ ಟಿಎಂಸಿ ಸಂಸದೀಯ ತಂಡ ಚುನಾವಣಾ ಅಧಿಕಾರಿಗಳ ಭೇಟಿಗೆ ಸಮಯ ಕೇಳಿದೆ.
ಇದಕ್ಕೂ ಮುನ್ನ, ಹಿಂಸಾಚಾರದ ಹಿಂದೆ ಹೊರಗಡೆಯವರ ಕೈವಾಡ ಇದೆ ಎಂದು ಟಿಎಂಸಿ ವಕ್ತಾರರಾಗಿರುವ ಡೆರೆಕ್ ಒ ಬ್ರೇಯಿನ್ ಅವರು ಟ್ವೀಟ್ ಮಾಡಿದ್ದರು.
ನಿನ್ನೆ ಕೋಲ್ಕತ್ತಾ ವಿಶ್ವವಿದ್ಯಾನಿಲದ ಕಾಲೇಜ್ ಸ್ಟ್ರೀಟ್ ನಿಂದ ಅಮಿತ್ ಶಾ ರೋಡ್ ಶೋ ಸಾಗುತ್ತಿದ್ದಂತೆ ವೇಳೆ ಉಭಯ ಪಕ್ಷಗಳ ಕಾರ್ಯಕರ್ತರು ನಡುವೆ ಮಾತಿನ ಚಕಮಕಿ ಉಂಟಾಗಿ ನೂಕಾಟ, ತಳ್ಳಾಟ ಹಾಗೂ ಕಲ್ಲು ತೂರಾಟ ಸಹ ನಡೆದಿತ್ತು. ಅದೃಷ್ಟವಶಾತ್ ಅಮಿತ್ ಶಾ ಅವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಟಿಎಂಸಿ ಬೆಂಬಲಿಗರು ಕಪ್ಪು ಬಾವುಟ ಪ್ರದರ್ಶಸಿ  ಅಮಿತ್ ಶಾ ಗೋ ಬ್ಯಾಕ್ ಎಂಬ  ಘೋಷಣೆ   ಕೂಗಿದರು. ವಿಶ್ವವಿದ್ಯಾನಿಲಯದ ಹೊರಗಿದ್ದ ಎಬಿವಿಪಿ ಬೆಂಬಲಿಗರು ಈ  ಸಮಯದಲ್ಲಿ ಜೈಶ್ರೀರಾಮ್ ಎಂಬ ಘೋಷಣೆ ಮೊಳಗಿಸಿದರು. ಈ ವೇಳೆ ಉಭಯ ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದ್ದು, ಕಲ್ಲು  ತೂರಾಟ ನಡೆಲಾಗಿದೆ.
ಉದ್ರಿಕ್ತರ ಗುಂಪು ವಿವೇಕಾನಂದ ಕಾಲೇಜ್ ಬಳಿ ಸ್ಥಾಪಿಸಲಾಗಿದ್ದ 19 ನೇ ಶತಮಾನದ ಸಮಾಜ ಸುಧಾರಕ ಈಶ್ವರ್ ಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದೆ.
SCROLL FOR NEXT