ಬೆಂಗಳೂರು: ಟಿಡಿಪಿ ಮುಖ್ಯಸ್ಥ ಹಾಗೂ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮಂಗಳವಾರ ರಾತ್ರಿ ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಮತ್ತು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದ್ದಾರೆ.
ಇಂದು ಮಧ್ಯಾಹ್ನ ದೆಹಲಿಯಲ್ಲಿ ಪ್ರತಿಪಕ್ಷಗಳ ಸಭೆಯಲ್ಲಿ ಭಾಗವಹಿಸಿದ್ದ ಚಂದ್ರಬಾಬು ನಾಯ್ಡು ಅವರು ಈಗ ಬೆಂಗಳೂರಿಗೆ ಆಗಮಿಸಿ, ದೇವೇಗೌಡ ಹಾಗೂ ಕರ್ನಾಟಕ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದಾರೆ. ದೆಹಲಿಯಲ್ಲಿ ನಡೆದ ಪ್ರತಿಪಕ್ಷಗಳ ಸಭೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕುಮಾರಸ್ವಾಮಿ ಭಾಗವಹಿಸಬೇಕಿತ್ತು. ಆದರೆ ಈ ಇಬ್ಬರು ನಾಯಕರು ಕೊನೆಗಳಿಗೆಯಲ್ಲಿ ದೆಹಲಿ ಪ್ರವಾಸ ರದ್ದು ಮಾಡಿದ್ದರು.
ಹೀಗಾಗಿ ಚಂದ್ರಬಾಬು ನಾಯ್ಡು ಅವರು ದೇವೇಗೌಡರನ್ನು ಭೇಟಿ ಮಾಡಲು ಇಂದು ರಾತ್ರಿ ಬೆಂಗಳೂರಿಗೆ ಆಗಮಿಸಿ ನಗರದ ಪದ್ಮನಾಭ ನಗರದಲ್ಲಿರುವ ದೇವೇಗೌಡರ ನಿವಾಸದಲ್ಲಿ ಚರ್ಚೆ ನಡೆಸಿದ್ದಾರೆ. ಮೇ 23ರಂದು ಲೋಕಸಭೆ ಚುನಾವಣೆ ಫಲಿತಾಂಶ ಹಿನ್ನೆಲೆ ಹಾಗೂ ಎಕ್ಸಿಟ್ ಪೋಲ್ ನಲ್ಲಿ ಹೊರಹೊಮ್ಮಿರುವ ಫಲಿತಾಂಶದ ಕುರಿದು ನಾಯ್ಡು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಅಂತೆಯೇ ಒಂದು ವೇಳೆ ಫಲಿತಾಂಶ ವಿರುದ್ಧವಾದರೂ ಬಳಿಕ ಯಾವ ತೀರ್ಮಾನ ಕೈಗೊಳ್ಳಬಹುದು ಮತ್ತು ಮಙಾಘಟ್ ಬಂಧನದ ಮುಂದಿನ ನಡೆ ಕುರಿತಂತೆ ನಾಯ್ಡು ದೇವೇಗೌಡ ಮತ್ತು ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.