ಬೆಂಗಳೂರು: ಸುಮಲತಾ ಅವರನ್ನು ಜಾತಿ ಆಧಾರದ ಮೇಲೆ ಟೀಕಿಸುವ ಭರದಲ್ಲಿ ಮಂಡ್ಯವನ್ನು ನಾಯ್ಡುಮಯ ಮಾಡಲಾಗುತ್ತಿದೆ ಎಂದು ಹೇಳಿದ್ದ ಸಂಸದ ಎಲ್.ಆರ್. ಶಿವರಾಮೇಗೌಡ ವಿರುದ್ಧ ಬಲಿಜ ಸಂಘಟನೆಯೊಂದು ದೂರು ನೀಡಿದೆ.
ಜೆಡಿಎಸ್ ಸಂಸದ ಎಲ್ ಆರ್ ಶಿವರಾಮೇ ಗೌಡ ನಾಯ್ಡು ಸಮುದಾಯದ ಆತ್ಮಗೌರವಕ್ಕೆ ಧಕ್ಕೆ ತಂದ ಆರೋಪದ ಮೇರೆಗೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಬಲಿಜ ಸಂಘಟನೆ ಮನವಿ ಮಾಡಿಕೊಂಡಿದೆ. ರಾಜ್ಯದಲ್ಲಿ ಸೌಹಾರ್ಧಯುತವಾಗಿ ಬದುಕುತ್ತಿರುವ ಬಲಿಜ ನಾಯ್ಡು ಸಮುದಾಯದ ಜನರ ವಿರುದ್ಧ ಆಡಿರುವ ಮಾತಿಗೆ ಶಿವರಾಮೇಗೌಡ ಮತ್ತಿತರರು ಕ್ಷಮೆ ಕೇಳಬೇಕೆಂದು ಕರ್ನಾಟಕ ಬಲಿಜ ಸಂಘ ಆಗ್ರಹಿಸಿದೆ.
ರಾಜ್ಯಾದ್ಯಂತ 50 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಬಲಿಜ ನಾಯ್ಡು ಸಮುದಾಯದವರು ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 10ರಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಮಂಡ್ಯವೊಂದರಲ್ಲೇ ಸಮುದಾಯದ 50 ಸಾವಿರ ವೋಟ್ ಇದೆ. ಕರ್ನಾಟಕದಲ್ಲಿ ಕನ್ನಡವನ್ನು ಒಪ್ಪಿಕೊಂಡು ಒಟ್ಟಾಗಿ ಜೀವನ ನಡೆಸುತ್ತಿದ್ದೇವೆ. ಇಲ್ಲಿಯವರೆಗೂ ಯಾವುದೇ ಭಿನ್ನಾಭಿಪ್ರಾಯ ನಮ್ಮ ಮಧ್ಯೆ ಇರಲಿಲ್ಲ. ಈಗ ನಾಯ್ಡು ಜಾತಿ ಬಗ್ಗೆ ಕೀಳಾಗಿ ಮಾತನಾಡುವ ಮೂಲಕ ಜೆಡಿಎಸ್ ಮುಖಂಡರು ಜಾತಿ ಜಾತಿ ಮಧ್ಯೆ ಎತ್ತಿಕಟ್ಟುತ್ತಿದ್ದಾರೆ. ಅವರು ನಾಯ್ಡು ಸಮುದಾಯಕ್ಕೆ ಕ್ಷಮೆ ಕೇಳಬೇಕು ಎಂದು ಬಲಿಜ ನಾಯ್ಡು ಸಂಘಟನೆಯ ಪ್ರಧಾನ ಕಾರ್ಯದರ್ಶಿ ವೀರೇಂದ್ರ ಕುಮಾರ್ ಒತ್ತಾಯಿಸಿದ್ದಾರೆ.
ಇನ್ನು ಇತ್ತೀಚೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾ ಅವರನ್ನು ಟೀಕಿಸಿದ್ದ ಜೆಡಿಎಸ್ ಸಂಸದ ಎಲ್.ಆರ್. ಶಿವರಾಮೇಗೌಡ ಅವರು, 'ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಅಂಬರೀಷ್ ಅವರು ನಾಯ್ಡು ಸಮುದಾಯಕ್ಕೆ ಸೇರಿದವರು. ಅವರ ಜೊತೆ ಪ್ರಚಾರ ಮಾಡುತ್ತಿರುವ ದರ್ಶನ್ ಮತ್ತು ರಾಕ್ ಲೈನ್ ವೆಂಕಟೇಶ್ ಅವರೂ ನಾಯ್ಡುಗಳೇ. ಬೆಂಗಳೂರು ಸುತ್ತಮುತ್ತ ಇದ್ದ ನಾಯ್ಡುಗಳು ಈ ಮಂಡ್ಯಕ್ಕೆ ಬಂದಿದ್ದಾರೆ. ಮಂಡ್ಯವನ್ನು ನಾಯ್ಡುಮಯ ಮಾಡಲು ಹೊರಟಿದ್ದಾರೆ ಎಂದು ಹೇಳಿ ವಿವಾದ ಸೃಷ್ಟಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos