ಬೆಂಗಳೂರು: ಜೆಡಿಎಸ್ ಪಕ್ಷದಲ್ಲಿ ಸಂಭ್ರಮಕ್ಕಿಂತ ಸಂಕಟಗಳೇ ಹೆಚ್ಚು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಹೇಳಿದ್ದಾರೆ.
ಪ್ರೆಸ್ ಕ್ಲಬ್ ನಲ್ಲಿಂದು ನಡೆದ ‘ಮಾತು ಮಂಥನ’ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿ, “ಪಕ್ಷದಿಂದ ಬಿಡುಗಡೆಯನ್ನು ಬೇಡಿ ರಾಜೀನಾಮೆ ನೀಡಲು ಹೋದಾಗ ದೊಡ್ಡವರು ಬೇಡ ಎಂದರು. ಹೀಗಾಗಿ ಪಕ್ಷದಲ್ಲೇ ಮುಂದುವರಿಯಬೇಕಾಯಿತು” ಎಂದರು.
ಜಗತ್ತಿನ ದೊಡ್ಡ ಜನತಂತ್ರ ವ್ಯವಸ್ಥೆಗೆ ಲೋಕಸಭೆ ಚುನಾವಣೆ ನಡೆಯುತ್ತಿದೆ. ಡಾ. ಬಿ.ಆರ್ ಅಂಬೇಡ್ಕರ್ ಅವರ ಪ್ರಕಾರ ಚುನಾವಣೆ ಎನ್ನುವುದು ಜನತಂತ್ರ ವ್ಯವಸ್ಥೆಯ ಜಾತರೆ. ಈ ಬಾರಿಯ ಚುನಾವಣೆ ಬಹುತ್ವದ ಬಗೆಗಿನ ಹೋರಾಟ ಹಾಗೂ ನಕಲಿ ರಾಯಭಾರಿಗಳ ನಡುವಿನ ಹೋರಾಟ. ನಕಲಿ ರಾಷ್ಟ್ರೀಯವಾದಿ ಮತ್ತು ಭಾರತದ ನಡುವಿನ ಸಂಘರ್ಷವೇ ಈ ಬಾರಿಯ ಚುನಾವಣೆ” ಎಂದು ಹೇಳಿದರು.
ಕಳೆದ ಬಾರಿಯ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ ಭರವಸೆ ಏನಾಯಿತು? ಎಷ್ಟರಮಟ್ಟಿಗೆ ಪಾಲನೆಯಾಯಿತು ಎಂಬುದು ದೊಡ್ಡ ಪ್ರಶ್ನೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ಈಡೇರಲಿಲ್ಲ. ಬಿಎಸ್ಎನ್ಎಲ್ ಸಂಸ್ಥೆಯ 50 ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ.
ಉದ್ಯೋಗ ಕೊಡುವುದರ ಬದಲು ಕಸಿಯುವ ಕೆಲಸವಾಗುತ್ತಿದೆ ಎಂದು ಎನ್ ಡಿಎ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಚ್. ವಿಶ್ವನಾಥ್ ಹರಿಹಾಯ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos