ಐಟಿ ವಿರುದ್ಧ ಎಚ್ ಡಿಕೆ ವಾಗ್ದಾಳಿ
ಬೆಂಗಳೂರು: ಐಟಿ ಇಲಾಖೆ ಮುಂದೆ ಕಾಂಗ್ರೆಸ್-ಜೆಡಿಎಸ್ ನಾಯಕರು ನಡೆಸಿದ್ದ ಪ್ರತಿಭಟನೆ ಕುರಿತಂತೆ ಚಾರ್ಜ್ ಶೀಟ್ ದಾಖಲಿಸಿರುವ ಐಟಿ ಇಲಾಖೆ ನಡೆಯನ್ನು ಸಿಎಂ ಎಚ್ ಡಿಕುಮಾರಸ್ವಾಮಿ ತೀವ್ರ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ ಅವರು, 'ನಮ್ಮ ಜೊತೆ ಚೆಲ್ಲಾಟ ಆಡಬೇಡಿ. ಮಂಡ್ಯಕ್ಕೆ 300 ಜನರ ಕಳಿಸಿ ರೇಡ್ ಮಾಡ್ತೀಯಾ? ಎಲ್ಲಿದ್ದೀಯಾಪ್ಪಾ ಬಾಲಕೃಷ್ಣ.? ಬಾಲಕೃಷ್ಣ ಕೊಟ್ಟಿರುವ ದೂರು ಬಿಜೆಪಿ ಹೆಡ್ ಕ್ವಾಟ್ರಸ್ ನಲ್ಲಿ ಟೈಪ್ ಮಾಡಿರೋದು. ಬಾಲಕೃಷ್ಣ ಬಿಜೆಪಿ ಏಜೆಂಟ್ ಎಂದು ಏಕವಚನದಲ್ಲೇ ಆದಾಯ ತೆರಿಗೆ ಮುಖ್ಯಸ್ಥ ಬಾಲಕೃಷ್ಣ ವಿರುದ್ಧ ಎಚ್ ಡಿಕೆ ವಾಗ್ದಾಳಿ ನಡೆಸಿದರು.
ಇದೇ ವೇಳೆ ಮಂಡ್ಯ ಡಿಸಿ ಮಂಜುಶ್ರೀ ವರ್ಗಾವಣೆ ಕುರಿತು ಕಿಡಿಕಾರಿದ ಎಚ್ ಡಿಕೆ, 'ಚುನಾವಣಾ ಆಯೋಗವೇ ಡಿಸಿಗಳನ್ನ ನೇಮಕ ಮಾಡಿದೆ. ಆದರೆ ಈ ಚುನಾವಣೆಯಲ್ಲಿ 6 ಡಿಸಿಗಳನ್ನು ಬದಲಾವಣೆ ಮಾಡಲಾಗಿದೆ. ಮಂಡ್ಯ ಡಿಸಿಯನ್ನು ವರ್ಗಾವಣೆ ಮಾಡಿದ್ದಾರೆ. ನಾಳೆ ಬೇರೆ ಯಾರಾದರೂ ಈ ಡಿಸಿ ಮೇಲೆ ದೂರು ಕೊಟ್ರೆ ಅವರನ್ನು ಬದಲಾವಣೆ ಮಾಡ್ತೀರಾ? ಎಂದು ಪ್ರಶ್ನಿಸಿದರು. ಅಂತೆಯೇ ಇಂಥಹ ಚುನಾವಣಾ ಆಯೋಗವನ್ನು ನಾನು ಎಲ್ಲೂ ನೋಡಿಲ್ಲ. ಚುನಾವಣಾ ಆಯೋಗ, ಇಡಿ, ಸಿಬಿಐ ಮೋದಿ ಆಣತಿಯಂತೆ ನಡೆಯುತ್ತಿದೆ ಎಂದು ಆರೋಪಿಸಿದರು.
ಮೋದಿ ಹಿಟ್ಲರ್ ಗಿಂತ ಕೆಟ್ಟವನು!
ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ಅವರು, 'ಮೋದಿ ಹಿಟ್ಲರ್ ಇದ್ದಂತೆ, ದೇಶವನ್ನ ಹಾಳು ಮಾಡ್ತಾನೆ. ಡಿಕ್ಟೇಟರ್ ಕ್ಕಿಂತ ಕೆಟ್ಟವನು. ಶ್ರೀಕಾಂತ್ ಎಂಬಾತ ನನ್ನ ಮನೆಗೆ ಬಂದು ಹೋದಾಗ, 30 ಜನ ಐಟಿ ಅವ್ರ ಅವ್ರನ್ನ ತಪಾಸಣೆ ಮಾಡಿದ್ರು. ಫೋನ್ ಚೆಕ್ ಮಾಡಿದರು. ಇದೆಲ್ಲಾ ಯಾಕೆ? ಎಂದು ಪ್ರಶ್ನೆ ಮಾಡಿದರು.ಯುವಕರನ್ನು ದಾರಿ ತಪ್ಪಿಸುವ ಕೆಲಸ ದೇಶದಲ್ಲಿ ನಡೆಯುತ್ತಿದೆ. ಮೋದಿ, ಬಿಜೆಪಿ ನಾಯಕರು ಯಾವ ಸಾಧನೆ ಮಾಡಿಲ್ಲ. ದೇಶದ ರಕ್ಷಣೆಯಲ್ಲಿ ಮೋದಿ ಓಟ್ ಕೇಳ್ತಿದ್ದಾರೆ. ಕಾಂಗ್ರೆಸ್ ಅವಧಿಯಲ್ಲೂ ದೇಶದಲ್ಲಿ ರಕ್ಷಣೆ ಇತ್ತು. ನಾನು ಪುಲ್ವಾಮ ದಾಳಿ ಬಗ್ಗೆ ಮಾಜಿ ಯೋಧ ಹೇಳಿದ್ದನ್ನ ನಾನು ಹೇಳಿದ್ದೆ. ಆದರೆ ನನ್ನ ಭಾಷಣ ತಿರುಚಿ ಮಾಧ್ಯಮಗಳು ಪ್ರಸಾರ ಮಾಡಿದವು. ನೀವು ಬೇಕಾದ್ರೆ ನನ್ನ ಭಾಷಣ ಕೇಳಿ ನಿಮಗೆ ಗೊತ್ತಾಗುತ್ತೆ ಎಂದು ಮಾಧ್ಯಮಗಳ ಮೇಲೂ ಸಿಎಂ ಕೆಂಡಕಾರಿದರು.
ದೇಶದ ರಕ್ಷಣೆ ಬಗ್ಗೆ ಬಿಜೆಪಿ ಅವರು ಮಾತ್ರ ಗುತ್ತಿಗೆ ತಗೊಂಡಿಲ್ಲ. ನಾನು ಕರ್ನಾಟಕದಲ್ಲೇ ಬಾಳುತ್ತೇನೆ. ಕಾಂಗ್ರೆಸ್ 50 ವರ್ಷ ಮಾಡದ ಸಾಧನೆ ನಾನು ಮಾಡಿದೆ ಅಂತ ಮೋದಿ ಹೇಳ್ತಾರೆ. ಮೋದಿ 5 ವರ್ಷದಲ್ಲಿ ಏನೂ ಮಾಡದೆ ಈಗ ಮತ್ತೆ ಮತ್ತೆ ಅಧಿಕಾರ ಕೊಡಿ ಅಂತ ಹೇಳ್ತಿದ್ದಾರೆ. 1 ಲಕ್ಷ ಸಾಲ ಬಡ್ಡಿ ರಹಿತ ಸಾಲ ಕೊಡ್ತೀನಿ ಅಂತ ಮೋದಿ ಈಗ ಹೇಳ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ 3 ಲಕ್ಷ ರೂ. ಬಡ್ಡಿ ರಹಿತ ಸಾಲ ಕೊಡುತ್ತಿದ್ದೇವೆ. ಕರ್ನಾಟಕದ ಯೋಜನೆಯನ್ನು ಮೋದಿ ಕಾಪಿ ಮಾಡಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ ಎಂದು ಎಚ್ ಡಿಕೆ ಆರೋಪಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos