ಕರ್ನಾಟಕ

ಮೈಸೂರು: ಉತ್ತರ ಪ್ರದೇಶದಲ್ಲಿ ಬಿಜೆಪಿ ಸಂಪೂರ್ಣ ನೆಲ ಕಚ್ಚಲಿದೆ- ಮಾಯಾವತಿ

Nagaraja AB

ಮೈಸೂರು:ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಸಂಪೂರ್ಣ ನೆಲ ಕಚ್ಚಲಿದೆ ಎಂದು ಬಿಎಸ್ಪಿ ವರಿಷ್ಠೆ ಮಾಯಾವತಿ ಹೇಳಿದ್ದಾರೆ.

ಮಹಾರಾಜ ಕಾಲೇಜು ಮೈದಾನದಲ್ಲಿ 'ಆನೆ ನಡಿಗೆ ಸಂಸತ್  ಕಡೆಗೆ' ಎಂಬ ಹೆಸರಿನಲ್ಲಿ ಆಯೋಜಿಸಿದ್ದ  ಬಿಎಸ್ ಪಿ ಸಮಾವೇಶದಲ್ಲಿ ಮಾತನಾಡಿದ ಅವರು, 2014 ರ ಚುನಾವಣೆಯಲ್ಲಿ 80 ಕ್ಷೇತ್ರಗಳಲ್ಲಿ 71 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬಿಜೆಪಿ ಈ ಬಾರಿ  ಬಿಎಸ್ಪಿ- ಎಸ್ಪಿ - ಆರ್ ಎಲ್ ಡಿ ಮೈತ್ರಿಯಿಂದಾಗಿ ಧೂಳಿಪಟವಾಗಲಿದೆ ಎಂದು ಭವಿಷ್ಯ ನುಡಿದರು.

ಭಾಷಣದ ಪೂರ್ಣವಧಿ ಸಮಯವನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಟೀಕಿಸಲು ಮುಡಿಪಾಟ್ಟ ಮಾಯಾವತಿ, ಬಿಜೆಪಿಯ ಚೌಕಿದಾರ್ ಹಾಗೂ ಕಾಂಗ್ರೆಸ್ ನ ನ್ಯಾಯ್ ಕನಿಷ್ಠ ಆದಾಯ ಯೋಜನೆ ಬಗ್ಗೆ ವ್ಯಂಗ್ಯವಾಡಿದರು. ಕಾಂಗ್ರೆಸ್ , ಬಿಜೆಪಿ ಹಲವಾರು ವರ್ಷ ದೇಶ ಆಳಿವೆ. ಆದರೆ, ಬಡತನ ನಿರ್ಮೂಲನೆ ಮಾಡಲು ಈ ಪಕ್ಷಗಳಿಂದ ಸಾಧ್ಯವಾಗಿಲ್ಲ. ಉದ್ಯೋಗದಿಂದ ಮಾತ್ರ ಬಡತನ ನಿರ್ಮೂಲನೆ  ಸಾಧ್ಯ.  ಬಿಎಸ್ ಪಿ ಅಧಿಕಾರಕ್ಕೆ ಬಂದರೆ  ಪ್ರತಿ ಬಡ ಕುಟುಂಬದ ಒಬ್ಬರಿಗೆ ಸರ್ಕಾರಿ ಸಂಸ್ಥೆಗಳಲ್ಲಿ ಉದ್ಯೋಗ ನೀಡುತ್ತೇವೆ ಎಂದರು.

 ಬಿಜೆಪಿ ಇಡಿ, ಸಿಬಿಐ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ.ವಿಪಕ್ಷಗಳ ನಾಯಕರ ಮನೆಗಳ ಮೇಲೆ ದಾಳಿ ನಡೆಸುತ್ತಿದೆ. ಭ್ರಷ್ಟಚಾರ ಪ್ರತಿ ಹಂತದಲ್ಲಿ ತಾಂಡವವಾಡುತ್ತಿದೆ. ಹಿಂದೆ ಕಾಂಗ್ರೆಸ್ ಸರ್ಕಾರ ಬೊಪೋರ್ಸ್  ಹಗರಣದಲ್ಲಿ ಈಗ ಬಿಜೆಪಿ ಸರ್ಕಾರ ರಫೇಲ್ ಹಗರಣದಲ್ಲಿ ಮುಳುಗಿವೆ ಎಂದು ದೂರಿದರು.

 ಕರ್ನಾಟಕದಲ್ಲಿ  ಬಿಎಸ್ಪಿ ಪಕ್ಷದ ಎನ್  ಮಹೇಶ್ ಅವರನ್ನು ಕೊಳ್ಳೇಗಾಲದಿಂದ ಆರಿಸಿ ಶಾಸಕರನ್ನಾಗಿ ಮಾಡಿದ್ದೀರಿ. ಸಚಿವರೂ ಆಗಿದ್ದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಮರ್ಥ್ಯವನ್ನು ಬಿಎಸ್ ಪಿ ಹೊಂದಿದೆ ಎಂದು ಮಾಯಾವತಿ ವಿಶ್ವಾಸ ವ್ಯಕ್ತಪಡಿಸಿದರು.

SCROLL FOR NEXT