ಮದ್ದೂರು: ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಅತಂತ್ರ ಮಾಡುವ ಯತ್ನ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅಳಲು ತೋಡಿಕೊಂಡಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದ ಮದ್ದೂರಿನ ಗೆಜ್ಜಲಗೆರೆಯಲ್ಲಿ ತಮ್ಮ ಪುತ್ರ ನಿಖಿಲ್ ಪರ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಕುಮಾರಸ್ವಾಮಿ,ಮಂಡ್ಯದಲ್ಲಿ ಏಳಕ್ಕೆ ಏಳಕ್ಕೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಶಾಸಕರನ್ನು ಆಯ್ಕೆ ಮಾಡಿದ್ದೀರಿ, ಜಿಲ್ಲೆಯ ಅಭಿವೃದ್ಧಿಗಾಗಿ ಬಜೆಟ್ ನಲ್ಲಿ ಬರೋಬ್ಬರಿ 9 ಸಾವಿರ ಕೋಟಿ ಹಣ ನೀಡಿದ್ದೇನೆ.ನನ್ನ ಮಗನನ್ನು ಅಭ್ಯರ್ಥಿಯನ್ನಾಗಿ ಮಾಡುವ ದೃಷ್ಟಿಯಿಂದ ಈ ಹಣ ನೀಡಲಿಲ್ಲ ಎಂದರು.
ಇದೇ ವೇಳೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ಒಂದು ಮುಖ ನೋಡಿದ್ದಿರಿ , ಇನ್ನೋಂದು ಮುಖ ನೋಡಿಲ್ಲ ಎಂಬ ಹೇಳಿಕೆ ಕುರಿತಂತೆ ಮಾತನಾಡಿದ ಕುಮಾರಸ್ವಾಮಿ, ಪ್ರಚಾರಕ್ಕೆ ಬಂದಾಗ ಸುಮಲತಾ ಅಂಬರೀಷ್ ಅವರ ಇನ್ನೊಂದು ಮುಖವನ್ನು ತೋರಿಸುವಂತೆ ಕೇಳಿ ಎಂದರು.
ನಾವು ಕುತಂತ್ರ ರಾಜಕಾರಣ ಮಾಡುವುದಿಲ್ಲ, ಯಾರನ್ನೂ ಹೆದರಿಸಿ ಚುನಾವಣೆ ಮಾಡಿಲ್ಲ, ಕೀಳುಮಟ್ಟದ ರಾಜಕೀಯ ಮಾಡುವುದು ನಮ್ಮಗೆ ಗೊತ್ತೇ ಇಲ್ಲ ಎಂದ ಕುಮಾರಸ್ವಾಮಿ, ಒಂದು ಚುನಾವಣೆಯನ್ನೂ ಗೆಲ್ಲಲು ಆಗದ ಸಂದೇಶ್ ನಾಗರಾಜ್ ಅವರನ್ನು ನಾನೇ ವಿಧಾನಪರಿಷತ್ ಸದಸ್ಯನಾಗಿ ಮಾಡಿದ್ದೇ. ಆದರೆ, ಈಗ ನನ್ನ ವಿರುದ್ಧ ಚರ್ಚೆ ಮಾಡ್ತಾನೆ ಎಂದು ವಾಗ್ದಾಳಿ ನಡೆಸಿದರು.