ನವದೆಹಲಿ: ಹಾಸನದ ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಪ್ರಮಾಣಪತ್ರವನ್ನು ಮರುಪರಿಶೀಲನೆ ನಡೆಸುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಜಿಲ್ಲಾ ಚುನಾವಣಾಧಿಕಾರಿಗೆ ನೋಟಿಸ್ ನೀಡಿದ್ದು, ನಾಮಪತ್ರ ಸಲ್ಲಿಸುವ ವೇಳೆ ಆಸ್ತಿ ವಿವರವನ್ನು ಮರೆಮಾಚಿ ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದರೆಂಬ ಆರೋಪಕ್ಕೆ ಗುರಿಯಾಗಿದ್ದರು.
ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹಾಗೂ ಭವಾನಿ ರೇವಣ್ಣ ಪ್ರತ್ಯೇಕವಾಗಿ ಡ್ರೋಣ್ ವರ್ಕ್ ಫೋರ್ಸ್ ಲಿಮಿಟೆಡ್ ಮತ್ತು ಅಧಿಕಾರ್ ವೆಂಚರ್ಸ್ ಕಂಪನಿಗೆ ಹಣ ಹೂಡಿಕೆ ಮಾಡಿದ್ದಾರೆ. ಈ ಮಾಹಿತಿಯನ್ನು ಅವರು ತಮ್ಮ ಆಸ್ತಿ ವಿವರದಲ್ಲಿ ದಾಖಲಿಸಿಲ್ಲ.ಅಲ್ಲದೆ ವಿವಿಧ ಕಂಪನಿಗಳಿಗೆ ಪ್ರಜ್ವಲ್ ರೇವಣ್ಣ ಪಾಲುದಾರರಾಗಿದ್ದರೂ ಅದರ ಮಾಹಿತಿಯನ್ನು ನಾಮಪತ್ರ ಸಲ್ಲಿಕೆ ವೇಳೆ ದಾಖಲಿಸಿಲ್ಲ ಎಂದು ಆರೋಪಿಸಿ ಆರ್ಟಿಐ ಕಾರ್ಯಕರ್ತ ಟಿ.ಜೆ ಅಬ್ರಾಹಂ ಚುನಾವಣಾ ಆಯೋಗಕ್ಕೆ ದೂರು ದಾಖಲಿಸಿದ್ದರು.
ಈ ದೂರಿನ ಅನ್ವಯ ಕ್ರಮಕ್ಕೆ ಮುಂದಾಗಿರುವ ಚುನಾವಣಾ ಆಯೋಗ ಈ ಕುರಿತು ವಿಚಾರಣೆ ನಡೆಸುವಂತೆ ನೋಟಿಸ್ ಜಾರಿ ಮಾಡಿದೆ. ಈ ಹಿಂದೆ ಕೂಡ ಬಿಜೆಪಿ ಅಭ್ಯರ್ಥಿ ಎ. ಮಂಜು ಪ್ರಜ್ವಲ್ ರೇವಣ್ಣ ಸುಳ್ಳು ಆಸ್ತಿ ವಿವರ ನೀಡಿದ್ದಾರೆ ಎಂದು ಆರೋಪ ಮಾಡಿ ಚುನಾವಣಾಧಿಕಾರಿಗೆ ದೂರು ನೀಡಿದ್ದರು.
ಮತದಾನಕ್ಕೆ 5 ದಿನಗಳು ಬಾಕಿ ಇರುವಾಗಲೇ ಚುನಾವಣಾ ಆಯೋಗ ಜಾರಿ ಮಾಡಿರುವ ನೋಟಿಸ್ ಪ್ರಜ್ವಲ್ ರೇವಣ್ಣಗೆ ಆತಂಕ ತಂದೊಡ್ಡಿದೆ.