ಕೊನೆಯ 24 ಗಂಟೆಗಳಲ್ಲಿ ನಡೆಯಲಿದೆ ನಿರ್ಣಾಯಕ ರಣತಂತ್ರ
ಬೆಂಗಳೂರು: ಅರ್ಧ ಕರ್ನಾಟಕದಲ್ಲಿ ಏಪ್ರಿಲ್ 18 ರಂದು 14 ಲೋಕಸಭೆ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 14ಲೋಕಸಭೆ ಕ್ಷೇತ್ರಗಳ ಚುನಾವಣೆಗೆ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ, ಕಳೆದ ಹಲವು ದಿನಗಳಿಂದ ರಾಜಕಾರಣಿಗಳು ರೋಡ್ ಶೋ, ರ್ಯಾಲಿ ನಡೆಸಿ ಬಿಸಿಲಿನಲ್ಲಿ ಬಳಲಿ ಬೆಂಡಾಗಿದ್ದಾರೆ.
ಮತದಾನಕ್ಕೆ ಬಾಕಿಯಿರುವ ಕೊನೆಯ 24 ಗಂಟೆಗಳು ನಿರ್ಣಾಯಕವಾಗಿವೆ, ಈ ಹಿಂದೆ ನಡೆದದ್ದು ಮುಖ್ಯವಲ್ಲ, ಗುರುವಾರ ಸಾಮಾನ್ಯ ಜನರಿಂದ ಅವರ ಭವಿಷ್ಯ ನಿರ್ಧಾರವಾಗುತ್ತದೆ. ಗುರುವಾರ ಮತದಾರ ಕೈಗೊಳ್ಳುವ ನಿರ್ಧಾರದಿಂದ ಅಭ್ಯರ್ಥಿಗಳು ಮತ್ತೊಂದು ಮಟ್ಟಕ್ಕೆತಲುಪಲಿದ್ದಾರೆ.
ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ, ಗುರುವಾರ ತಮ್ಮ ಕೊನೆಯ ದಾಳ ಉರುಳಲಿದೆ, ಮೊದಲ ಹಂತದ ಚುನಾವಣೆ ನಡೆಯುವ ಪಟ್ಟಿಯಲ್ಲಿರುವ ಮಂಡ್ಯ ಲೋಕಸಭೆ ಕ್ಷೇತ್ರದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ, ಸಿಎಂ ಕುಮಾರಸ್ವಾಮಿ ಪುತ್ರ ಮತ್ತು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ನಡುವೆ ಟೈಟ್ ಫೈಟ್ ಏರ್ಪಟ್ಟಿದೆ.
ಸುಮಲತಾ ಪರವಾಗಿ ಕನ್ನಡದ ಪ್ರಸಿದ್ದ ನಟರಾದ ಯಶ್ ಮತ್ತು ದರ್ಶನ್ ರ್ಯಾಲಿ ನಡೆಸಿ ಪ್ರಚಾರ ಕೈಗೊಂಡಿದ್ದಾರೆ, ಇನ್ನೂ ಮಂಡ್ಯದಲ್ಲೇ ಬೀಡು ಬಿಟ್ಟಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ನಿನ್ನೆ ಕೂಡ ಮಂಡ್ಯದ ಹಲವು ಹಳ್ಳಿಗಳಲ್ಲಿ ಮಗನ ಪರ ಪ್ರಚಾರ ನಡೆಸಿದ್ದಾರೆ, ಕಳೆದ ನಾಲ್ಕು ದಿನಗಳಿಂದ ಸಿಎಂ ಕುಮಾರಸ್ವಾಮಿ ಎಡೆಬಿಡದೇ ಪ್ರಚಾರ ನಡೆಸುತ್ತಿದ್ದಾರೆ,
ತುಮಕೂರಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಸುಡುವ ಬಿಸಿಲಿನಲ್ಲೂ ಗುಬ್ಬಿ ತಾಲೂಕಿನಲ್ಲಿ ಪ್ರಚಾರ ನಡೆಸಿದರು. ಪ್ರಚಾರ ಕೊನೆಯ ದಿನದಲ್ಲಿ ದೇವೇಗೌಡರು ತಮ್ಮ ಗೆಲುವಿನ ಬಗ್ಗೆ ಆತ್ಮ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ, ನಾನು ನನ್ನ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ, ನನ್ನನ್ನು ಯಾರು ಕಡೆಗಣಿಸುವಂತಿಲ್ಲ ಎಂದು ಹೇಳಿದ್ದಾರೆ, ಇನ್ನೂ ದೇವೇಗೌಡರ ಪರವಾಗಿ ಪ್ರಚಾರದಲ್ಲಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಕೂಡ ಭಾಗವಹಿಸಿದ್ದರು,
ಇನ್ನೂ ತುಮಕೂರಿನಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪರ ಬಿಜೆಪಿ ರಾಷ್ಚ್ರೀಯ ಅಧ್ಯಕ್ಷ ಅಮಿತ್ ಶಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಜಿ,ಎಸ್ ಬಸವರಾಜು ಪರ ಪ್ರಚಾರ ಕಾರ್ಯ ಕೈಗೊಂಡಿದ್ದರು. ಇನ್ನೂ ಚಿತ್ರದುರ್ಗದಲ್ಲಿ ಬಿ.ಎಸ್ ಯಡಿಯೂರಪ್ಪ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದರು.
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮೈಸೂರು ಭಾಗದಲ್ಲಿ ಸಿ,ಎಚ್ ವಿಜಯ್ ಶಂಕರ್ ಪರ ಪ್ರಚಾರದಲ್ಲಿ ಭಾಗವಹಿಸಿದ್ದರು, ಇನ್ನೂ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.