ಚಿಕ್ಕೋಡಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಆಡಳಿತಾವಧಿಯಲ್ಲಿ ಪ್ರತಿದಿನ 27 ಸಾವಿರ ಯುವಜನಾಂಗ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಉದ್ಯೋಗ ಬಗ್ಗೆ ಮಾತನಾಡುತ್ತಾರೆ. ಪ್ರತಿವರ್ಷ ಎರಡು ಕೋಟಿ ಉದ್ಯೋಗ ಒದಗಿಸುವುದಾಗಿ ಹೇಳುತ್ತಾರೆ. ಜಿಎಸ್ ಟಿ, ನೋಟ್ ಅಮಾನ್ಯತೆ ಜಾರಿಯಾದ ಬಳಿಕ ಸಣ್ಣ, ಮಧ್ಯಮ ಕೈಗಾರಿಕೆಗಳು ಹಾಳಾಗಿದ್ದು, ಲಕ್ಷಾಂತರ ಯುವಕರು ನಿರುದ್ಯೋಗಿಗಳಾಗಿದ್ದಾರೆ ಎಂದರು.
ಗಬ್ಬರ್ ಸಿಂಗ್ ಟ್ಯಾಕ್ಸ್ ಹಾಗೂ ನೋಟ್ ಅಮಾನ್ಯತೆಯಿಂದಾಗಿ ಜನರ ಜೇಬಿಯಿಂದ ಹಣವನ್ನು ಪ್ರಧಾನಿ ಮೋದಿ ದೋಚಿದ್ದು, ನಾವು ಅದನ್ನು ಪುನರುಕ್ತಿಗೊಳಿಸುತ್ತೇವೆ.ನ್ಯಾಯ್ ಯೋಜನೆ ಬಡತನದ ಮೇಲಿನ ಕಾಂಗ್ರೆಸ್ ಸರ್ಜಿಕಲ್ ಸ್ಟ್ರೈಕ್ ಆಗಿದ್ದು, ಇದರಿಂದ ದೇಶದಲ್ಲಿ ಬಡತನ ನಿರ್ಮೂಲನೆ ಆಗಲಿದೆ. 25 ಕೋಟಿ ಜನರು ಇದರ ಲಾಭ ಪಡೆಯಲಿದ್ದಾರೆ ಎಂದು ಹೇಳಿದರು.
ನರೇಂದ್ರ ಮೋದಿ ಧರ್ಮದ ಮಾತನಾಡುತ್ತಾರೆ. ಆದರೆ, ಎಲ್ ಕೆ ಅಡ್ವಾಣಿಗೆ ಹೇಗೆ ಮಾಡಿದ್ರು ಎಂಬುದನ್ನ ನೋಡಿದ್ದೇವೆ. ಅವರನ್ನು ಮೋದಿ ಗೌರವಿಸುವುದಿಲ್ಲ, ಎಲ್ಲೋ ಬೇರೆ ಕಡೆ ನೋಡುವುದನ್ನು ಆರಂಭಿಸುತ್ತಾರೆ. ನಂತರ ಧರ್ಮದ ಬಗ್ಗೆ ಮಾತನಾಡುತ್ತಾರೆ. ಅವರಿಗೆ ಹೇಳಲೂ ಬೇರೆ ಏನೂ ಇಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದರು.