ಕರ್ನಾಟಕ

ಮಂಡ್ಯ ಜನರ ಮನಸ್ಸು ಗೆದ್ದ ಸಂತೃಪ್ತಿ ಇದೆ: ಸುಮಲತಾ ಅಂಬರೀಷ್

Nagaraja AB

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬಹುದು ಅಥವಾ ಸೋಲಬಹುದು ಅದು ಪ್ರಮುಖ  ವಿಷಯವಲ್ಲ, ಆದರೆ, ಮಂಡ್ಯ ಜನರ ಹೃದಯವನ್ನು ಗೆದ್ದ ಸಂತೃಪ್ತಿ  ಇದೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಹೇಳಿದ್ದಾರೆ.

ಅಂಬರೀಷ್ ಮೇಲೆ ಮಂಡ್ಯ ಜನರು ಇಟ್ಟಿದ್ದ ಪ್ರೀತಿ, ಅಭಿಮಾನವನ್ನು ನಾನು ನೋಡಿದ್ದೇನೆ. ಈಗಲೂ ಕೂಡಾ ಅವರು ಅದೇ ಅಭಿಮಾನ ಇಟ್ಟುಕೊಂಡಿದ್ದಾರೆ. ಇದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ.

 ಮೇ 23 ರ ಚುನಾವಣಾ ಫಲಿತಾಂಶ ನಿರೀಕ್ಷೆಕುರಿತಂತೆ  ಪ್ರತಿಕ್ರಿಯಿಸಿದ ಸುಮಲತಾ, ನಾನು ಗೆಲ್ಲುತ್ತೇನೆ ಎಂಬುದು ಗೊತ್ತಿದೆ, ಆದರೆ, ಯಾವುದೇ ರೀತಿಯ ಸಮೀಕ್ಷೆ ಮಾಡಿಸಿಲ್ಲ,  ಜನರ ಕಣ್ಣಿನಲ್ಲಿ ನನ್ನ ಗೆಲುವನ್ನು ನೋಡುತ್ತಿದ್ದೇನೆ. ಶೇ, 80 ರಷ್ಟು ಮತದಾನವಾಗಿರುವುದು ಸಂತೋಷವಾಗಿದೆ.  ಶೇಕಡಾ 86 ರಷ್ಟು ಮೇಲುಕೋಟೆ  ಕ್ಷೇತ್ರದಲ್ಲಿ ನಡೆದಿದೆ. ಮಂಡ್ಯದಲ್ಲಿ 16 ರಿಂದ 17 ಲಕ್ಷ ಮತದಾರರಿದ್ದು, ಗೆಲುವು ಸಾಧಿಸಲು 7 ಲಕ್ಷಕ್ಕೂ ಅಧಿಕ ಮತಗಳು ಬೇಕಾಗಲಿವೆ . ಆ ಸಂಖ್ಯೆ ಪಡೆಯುತ್ತೇನೆ ಎಂಬ ವಿಶ್ವಾಸ ಇರುವುದಾಗಿ ಸುಮಲತಾ ಹೇಳಿದರು.

ಪ್ರಚಾರದ ವೇಳೆಯಲ್ಲಿ ಹಲವು ಮಂದಿ ತಮ್ಮಗೆ 50, 100 ರೂ. ನೀಡಿದ್ದಾರೆ. ಅದು ಜನರು ನಮ್ಮ ಮೇಲೆ ಇಟ್ಟಿರುವ ಪ್ರೀತಿಯನ್ನು ತೋರಿಸುತ್ತದೆ. ಇದು ನನ್ನಗೆ ಸಂತೃಪ್ತಿಯನ್ನುಂಟು ಮಾಡಿದೆ ಎಂದರು.
ಮಂಡ್ಯದಲ್ಲಿಯೇ ವಾಸಿಸಲು ನಿರ್ಧರಿಸಿರುವ ಸುಮಲತಾ  ಮಾರುತಿನಗರದಲ್ಲಿ ಮನೆ ಕಟ್ಟಲು ಯೋಚಿಸಿದ್ದಾರೆ. ತಮ್ಮ ಕಡೆ ಪ್ರಚಾರ ನಡೆಸಿದ ಸ್ಟಾರ್ ನಟರಾದ ದರ್ಶನ್ , ಯಶ್ ಸೇರಿದಂತೆ ಹಲವರನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಸುಮಲತಾ ಆರೋಪಿಸಿದ್ದಾರೆ.
SCROLL FOR NEXT