ಕರ್ನಾಟಕ

ಜೆಡಿಎಸ್ ತ್ರಿಮೂರ್ತಿಗಳಿಗೆ ಅಭಿನಂದನೆ ಸಲ್ಲಿಸಿದ ಸುಮಲತಾ ಬೆಂಬಲಿಗರು!

Nagaraja AB

ಮಂಡ್ಯ: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ಗೆಲುವಿಗೆ ಕಾರಣರಾದ ಜೆಡಿಎಸ್ ಪಕ್ಷದ ತ್ರಿಮೂರ್ತಿಗಳಿಗೆ ಸುಮಲತಾ ಅಂಬರೀಷ್ ಬೆಂಬಲಿಗರು ಅಭಿನಂದನೆ ಸಲ್ಲಿಸಿದ್ದಾರೆ.

ಮಂಡ್ಯದ ನೂರು ಅಡಿ ರಸ್ತೆಯಲ್ಲಿ ಸುಮಲತಾ ಬೆಂಬಲಿಗರು ಬ್ಯಾನರ್ ಕಟ್ಟಿದ್ದಾರೆ. ಈ ಬ್ಯಾನರ್ ನಲ್ಲಿ ಸಾರಿಗೆ ಸಚಿವ ಡಿ. ಸಿ. ತಮ್ಮಣ್ಣ, ವಿಧಾನಪರಿಷತ್ ಸದಸ್ಯ ಕೆ. ಟಿ. ಶ್ರೀರಂಠೇಗೌಡ, ಹಾಗೂ ಮಾಜಿ ಸಂಸದ ಎಲ್. ಆರ್. ಶಿವರಾಮೇಗೌಡರ ಪೋಟೋ ಹಾಕಿದ್ದಾರೆ. ಅ ಪೋಟೋ ಕೆಳಗೆ ಸುಮಲತಾ ಅಂಬರೀಷ್ ಗೆಲುವಿಗೆ ಕಾರಣವಾದ ತ್ರಿಮೂರ್ತಿಗಳಿಗೆ ಅಭಿನಂದನೆಗಳು ಎಂದು ಬರೆಯುವ ಮೂಲಕ ವ್ಯಂಗ್ಯವಾಡಿದ್ದಾರೆ.

ಲೋಕಸಭಾ ಚುನಾವಣೆಗೆ ಮುನ್ನ ಮನೆಗೆ ಹೋದವರಿಗೆ ಸುಮಲತಾ ನೀರು, ಕಾಫಿಯನ್ನು ಕೊಡಲ್ಲ ಅಂತಾ ಡಿ. ಸಿ. ತಮ್ಮಣ್ಣ ಟೀಕೆ ಮಾಡಿದ್ದರು. ಇನ್ನೂ ಸುಮಲತಾ ಗೌಡ್ತಿ ಅಲ್ಲ ಎಂದು ಶ್ರೀಕಂಠೇಗೌಡ ಹೇಳಿಕೆ ನೀಡಿದ್ದರು. ಸುಮಲತಾ ಮಾಯಾಂಗನೆ, ಆಂಧ್ರ ನಾಯ್ಡು , ಸಿನಿಮಾದವರನ್ನು ನಂಬಬೇಡಿ ಎಂದು ಶಿವರಾಮೇಗೌಡ ವ್ಯಂಗ್ಯ ವಾಡಿದ್ದರು.

ಈ ಮೂವರ ಹೇಳಿಕೆಗಳಿಗೆ ಚುನಾವಣಾ ಪ್ರಚಾರದ ಸಮಯದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು. ಈ ಅವಹೇಳನಾಕಾರಿ ಹೇಳಿಕೆಗಳಿಗೆ ಸುಮಲತಾ ಅಂಬರೀಷ್ ಅವರ ಗೆಲುವಿಗೆ ಸಹಕಾರ ಆಯ್ತು ಎಂದು ಅಭಿನಂದನಾ ಬ್ಯಾನರ್ ಹಾಕುವ ಮೂಲಕ ಜೆಡಿಎಸ್ ನಾಯಕರ ಬಗ್ಗೆ ವ್ಯಂಗ್ಯಮಾಡಿದ್ದಾರೆ.

SCROLL FOR NEXT