1999ರಲ್ಲಿ ಬಳ್ಳಾರಿ ಕ್ಷೇತ್ರಕ್ಕೆ ರಾಜಿನಾಮೆ ನೀಡಿ, 18 ವಿಷಯಗಳಲ್ಲಿ ಅಭಿವೃದ್ಧಿಗೆ ಸೋನಿಯಾ ಗಾಂಧಿ ರು. 3300 ಕೋಟಿ ಪ್ಯಾಕೇಜ್ ಘೋಷಿಸಿದ್ದರು. ಈ ಹಣದಲ್ಲಿ ಎಲ್ಲೆಲ್ಲೆ ಕಾಮಗಾರಿ ನಡೆಯಿತು? ಎಷ್ಟು ಹಣ ಖರ್ಚಾಯಿತು? ಎಂಬ ಮಾಹಿತಿಯೇ ಇಲ್ಲ. ಹಲವೆಡೆ ಕಾಮಗಾರಿ ಸ್ಥಗಿತಗೊಂಡಿದೆ. ಕೆಲವೆಡೆ ಕೆಲಸ ಮುಗಿಸಿದ್ದರೂ ಹಣ ಬಿಡುಗಡೆಯಾಗಿಲ್ಲ. ಏಕೆಂದು ಕೇಳಿದರೆ, ಯಾರಿಗೂ ಗೊತ್ತಿಲ್ಲ. ಈ ಕುರಿತು ಪತ್ರಿಕೆಯ ಓದುಗ ಸುರೇಶ್ ಸಂಗೊಳ್ಳಿ ಅವರು ಪತ್ರ ಬರೆದು ಕೇಳಿದ ಪ್ರಶ್ನೆಗೆ ಇಲ್ಲಿದೆ ಉತ್ತರ.
-ಶಶಿಧರ ಮೇಟಿ
ಕನ್ನಡಪ್ರಭ ವಾರ್ತೆ ಬಳ್ಳಾರಿ ಮೇ 10
ಬಳ್ಳಾರಿ ಮತ್ತು ಅಮೇಠಿ ಲೋಕಸಭಾ ಕ್ಷೇತ್ರಗಳಿಂದ 1999ರಲ್ಲಿ ಸ್ಪರ್ಧಿಸಿ ಗೆದ್ದಿದ್ದ ಸೋನಿಯಾ ಗಾಂಧಿ, ಬಳ್ಳಾರಿ ಕ್ಷೇತ್ರಕ್ಕೆ ರಾಜಿನಾಮೆ ನೀಡಿದ್ದರು. ತಮ್ಮನ್ನು ಗೆಲ್ಲಿಸಿದ ಬಳ್ಳಾರಿಗರಿಗೆ ಕೃತಜ್ಞತೆ ಅರ್ಪಿಸಲು ಕ್ಷೇತ್ರದ ಅಭಿವೃದ್ಧಿ ಸಲುವಾಗಿ 3300 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದ್ದರು. ಇದನ್ನು ಸೋನಿಯಾ ಪ್ಯಾಕೇಜ್ ಎಂದೂ ಕರೆಯಲಾಗಿತ್ತು. ಆದರೆ, ಅದರ ಬಳಕೆ ಬಗ್ಗೆ ಮಾತ್ರ ಜನರಲ್ಲಿ ಕುತೂಹಲ ತಣಿದಿಲ್ಲ.
ಒಟ್ಟು 18 ವಿಷಯಗಳಿಗೆ ರು. 3300 ಕೋಟಿ ಅನುದಾನ ಘೋಷಣೆಯಾಗಿತ್ತು. ಶಿಕ್ಷಣ, ಆರೋಗ್ಯ, ರಸ್ತೆ, ಸೇತುವೆ, ವಿದ್ಯುಚ್ಛಕ್ತಿ ಉತ್ಪಾದನೆ, ಬಳ್ಳಾರಿ ಮಹಾನಗರದ ನೀರು, ಚರಂಡಿ ಅಭಿವೃದ್ಧಿ ಇದರಲ್ಲಿ ಸೇರಿತ್ತು. ಕೆಲವು ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಇನ್ನೂ ಕೆಲವು ಪೂರ್ಣಗೊಂಡರೂ ಹಣ ಬಿಡುಗಡೆಯಾಗಿಲ್ಲ.
ಸಾರ್ವಜನಿಕರ ಪ್ರಶ್ನೆಗಳು: ಇಷ್ಟೆಲ್ಲ ಅನುದಾನ ಘೋಷಿಸಿದರೂ ಈ ಪ್ಯಾಕೇಜ್ನಲ್ಲಿ ಎಷ್ಟು ಹಣ ಬಿಡುಗಡೆಯಾಗಿದೆ? ಯಾವ ಅಭಿವೃದ್ಧಿ ಕಾರ್ಯ ಆಗಿದೆ ಎಂಬ ಬಗ್ಗೆ ಬಳ್ಳಾರಿ ಜಿಲ್ಲೆಯ ಜನರಲ್ಲಿ ಗೊಂದಲವಿದೆ. ಅಭಿವೃದ್ಧಿಯೇ ಅಗಿಲ್ಲ ಎನ್ನುವುದಿಲ್ಲ. ಆದರೆ ಎಲ್ಲಿ, ಎಷ್ಟು, ಯಾವ ಅಭಿವೃದ್ಧಿಯಾಗಿದೆ ಎಂಬುದೇ ತಿಳಿಯುತ್ತಿಲ್ಲ. ಉದಾಹರಣೆಗೆ ಬಳ್ಳಾರಿ ನಗರದಲ್ಲಿ ರಿಂಗ್ ರಸ್ತೆ ನಿರ್ಮಾಣಕ್ಕೆ ರು. 59 ಕೋಟಿ ನಿಗದಿಯಾಗಿದೆ. ಆದರೆ ಪ್ಯಾಕೇಜ್ ಹಣ ಬಳಕೆಯಾಗಿದೆಯೇ? ಗೊತ್ತಿಲ್ಲ. 1800 ನಿವೇಶನ ಅಭಿವೃದ್ಧಿಗೆ ರು. 30 ಕೋಟಿ, 233 ಜನವಸತಿ ಪ್ರದೇಶದಲ್ಲಿ ಗುಣಮಟ್ಟದ ನೀರು ಪೂರೈಕೆಗೆ ರು. 75 ಕೋಟಿ ಮೀಸಲಿಡಲಾಗಿತ್ತು. ಈ ಹಣ ಬಿಡುಯಾಗಿದೆಯೆ? ಆಗಿದ್ದರೆ, ಯಾವ ಗ್ರಾಮಗಳು ಇದರ ಸೌಲಭ್ಯ ಪಡೆದಿವೆ ಎಂಬಿತ್ಯಾದಿ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಎದ್ದಿವೆ.
ಕಾಮಗಾರಿ ಮುಗಿದರೂ ಅನುದಾನವಿಲ್ಲ
ಪ್ಯಾಕೇಜ್ನಡಿ ಕೆಲ ಇಲಾಖೆಗಳಲ್ಲಿ ಕಾಮಗಾರಿ ನೆನೆಗುದಿಗೆ ಬಿದ್ದಿವೆ. ಇನ್ನೂ ಕೆಲ ಇಲಾಖೆಗಳಲ್ಲಿ ಕಾಮಗಾರಿ ಮುಗಿದರೂ ಹಣ ಬಿಡುಗಡೆಯಾಗಿಲ್ಲ. ಆರೋಗ್ಯ ಇಲಾಖೆಗೆ ಈ ಪ್ಯಾಕೇಜ್ನಲ್ಲಿ 225 ಕಾಮಗಾರಿಗಳು ಮಂಜೂರಾಗಿದ್ದು, 111 ಪೂರ್ಣಗೊಂಡಿವೆ. 104 ಕಾಮಗಾರಿ ಪ್ರಗತಿಯಲ್ಲಿವೆ. 10 ಕಾಮಗಾರಿ ಬಾಕಿ ಇವೆ. ಈವರೆಗೆ ಕೇವಲ ರು. 311 ಕೋಟಿ ಅನುದಾನ ಬಂದಿದೆ. ಪೂರ್ಣಗೊಂಡಿರುವ ಕಾಮಗಾರಿಗೆ ರು. 3.87 ಕೋಟಿ ಬಿಡುಗಡೆಯಾಗಿಲ್ಲ. ಪ್ರಗತಿಯಲ್ಲಿರುವ ಕಾಮಗಾರಿಗೆ ರು. 6.38 ಕೋಟಿ, ಬಾಕಿ ಇರುವ ಕಾಮಗಾರಿಗೆ ರು. 32 ಲಕ್ಷ ಸೇರಿ ರು. 10.57 ಕೋಟಿ ಬಿಡುಗಡೆಯಾಗಬೇಕು. ಬೇರೆ ಇಲಾಖೆಗಳಲ್ಲೂ ಇದೇ ಸಮಸ್ಯೆಯಿದೆ ಎಂದು ತಿಳಿದುಬಂದಿದೆ.
ವಿಶೇಷ ಪ್ಯಾಕೇಜ್ ಕುರಿತು ಅಧಿಕಾರಿಯೊಬ್ಬರನ್ನು ಸಂಪರ್ಕಿಸಿದಾಗ, ಇದೊಂದು ದೊಡ್ಡ ಮೊತ್ತದ ಯೋಜನೆ. 1999ರಲ್ಲಿ ಘೋಷಣೆಯಾಗಿ ಹಣ ಬಿಡುಗಡೆಯಾಗಿರುವುದರಿಂದ ಪ್ಯಾಕೇಜ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ವಿಶೇಷ ಪ್ಯಾಕೇಜ್ ಅಡಿ ಬಿಡುಗಡೆಯಾಗಿ, ಬಳಕೆಯಾಗಿರುವ ಅನುದಾನದ ಬಗ್ಗೆ ಪ್ರಗತಿ ಪರಿಶೀಲನೆ ಮಾಡಿದರೆ ಮಾತ್ರ ನಿಖರ ಮಾಹಿತಿ ಸಿಗಲಿದೆ ಎನ್ನುತ್ತಾರೆ ಅವರು.
- ಬಳ್ಳಾರಿ, ಸಿರುಗುಪ್ಪ ಮುಂತಾದ 8 ನಗರಗಳಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ 10 ಕೋಟಿ
- ಜಿಲ್ಲೆಯ 233 ಜನವಸತಿ ಪ್ರದೇಶದಲ್ಲಿ ಗುಣಮಟ್ಟದ ನೀರು ಪೂರೈಕೆಗೆ ರು. 75 ಕೋಟಿ
- ಸಂಡೂರು ನಗರಕ್ಕೆ ನೀರು ಪೂರೈಕೆ, ಅಭಿವೃದ್ಧಿಗೆ ರು. 4 ಕೋಟಿ
- ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ರು. 50 ಕೋಟಿ
- ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ರಾಥಮಿಕ ಶಿಕ್ಷಣಕ್ಕೆ ರು. 100 ಕೋಟಿ