ಹುಬ್ಬಳ್ಳಿ: ತೀವ್ರ ಪೈಪೋಟಿಗೆ ಕಾರಣವಾಗಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದ್ದು, ತೀರ್ಪಿನ ನಂತರದ ಕಾರ್ಯತಂತ್ರಗಳನ್ನು ಕಾಂಗ್ರೆಸ್ ಮತ್ತು ಬಿಜೆಪಿ ಈಗಾಗಲೇ ಅಂತಿಮಗೊಳಿಸಿವೆ. ಸಂಪೂರ್ಣ ಬಹುಮತ ಅಥವಾ ಅತಂತ್ರ ವಿಧಾನಸಭೆ ಎರಡೂ ಸನ್ನಿವೇಶಗಳಿಗೆ ಸಿದ್ಧವಾಗಿವೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರು ಹಳೆಯ ಪಕ್ಷಕ್ಕೆ ಟ್ರಬಲ್ ಶೂಟರ್ ಆಗಿದ್ದು, ಪಕ್ಷದ ಎಲ್ಲಾ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ರಣದೀಪ್ ಸಿಂಗ್ ಸುರ್ಜೇವಾಲಾ ಕೂಡ ಬೆಂಗಳೂರಿಗೆ ಆಗಮಿಸಿದ್ದು, ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ, ಡಿ.ಕೆ. ಶಿವಕುಮಾರ್, ಜಗದೀಶ್ ಶೆಟ್ಟರ್, ಎಚ್.ಕೆ. ಪಾಟೀಲ ಮತ್ತಿತರರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲೂ ಬಿರುಸಿನ ಚಟುವಟಿಕೆಗಳು ಕಂಡುಬರುತ್ತಿವೆ.
ಕಾಂಗ್ರೆಸ್ನ ಮೂಲಗಳ ಪ್ರಕಾರ, ಪಕ್ಷವು ಸಂಪೂರ್ಣ ಬಹುಮತ ಪಡೆದರೆ, ತಕ್ಷಣವೇ ಸರ್ಕಾರ ರಚಿಸುವುದು ಮೊದಲ ಆದ್ಯತೆಯಾಗಿದೆ. ಇದು ಬಿಜೆಪಿಯ ಆಪರೇಷನ್ ಕಮಲ ಯತ್ನವನ್ನು ವಿಫಲಗೊಳಿಸುವುದಾಗಿದೆ. ಒಂದು ವೇಳೆ ಪಕ್ಷಕ್ಕೆ ಸರ್ಕಾರ ರಚನೆಗೆ ಅಗತ್ಯಕ್ಕಿಂತ 10 ಸ್ಥಾನಗಳು ಕಡಿಮೆ ಬಂದರೆ, ಜೆಡಿಎಸ್ ಜೊತೆಗೆ ಸರ್ಕಾರ ರಚಿಸಲು ಪ್ರಯತ್ನಿಸಲು ಯೋಜನೆ ರೂಪಿಸಿದೆ. ಸಿದ್ಧರಾಮಯ್ಯ ಅವರು ಜೆಡಿಎಸ್ನ ಮಾಜಿ ನಾಯಕರಾಗಿರುವುದರಿಂದ ಮತ್ತು ಪಕ್ಷದಲ್ಲಿ ಆಳವಾದ ಸಂಪರ್ಕ ಹೊಂದಿರುವುದರಿಂದ ಈ ಜವಾಬ್ದಾರಿಯನ್ನು ಅವರಿಗೆ ನೀಡಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ಸುದ್ದಿಸಂಸ್ಥೆ ಐಎಎನ್ಎಸ್ಗೆ ತಿಳಿಸಿವೆ.
ಬಿಜೆಪಿಯ ಯೋಜನೆಯಂತೆ, ಪಕ್ಷವು ಪೂರ್ಣ ಬಹುಮತದ ನಿರೀಕ್ಷೆಯಲ್ಲಿದೆ. ಪಕ್ಷದ ಹಿರಿಯ ನಾಯಕರ ಪ್ರಕಾರ, ಒಂದು ವೇಳೆ ಕಡಿಮೆ ಸ್ಥಾನಗಳು ಲಭ್ಯವಾದರೆ, ಪಕ್ಷವು ನಿಷ್ಠೆ ಬದಲಿಸಿದ ಮತ್ತು ಗೆದ್ದಿರುವ ಮಾಜಿ ನಾಯಕರನ್ನು ಮರಳಿ ಪಕ್ಷಕ್ಕೆ ಕರೆತರಲು ಪ್ರಯತ್ನಿಸುತ್ತದೆ. ಈ ನಾಯಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸರ್ಕಾರಕ್ಕೆ ದಾರಿ ಮಾಡಿಕೊಡುವಂತೆ ಮನವಿ ಮಾಡಲಾಗುವುದು ಎನ್ನಲಾಗಿದೆ. ಅಲ್ಲದೆ, ಕೇಸರಿ ಪಕ್ಷವು ಸ್ವತಂತ್ರ ಅಭ್ಯರ್ಥಿಗಳ ಬೆಂಬಲವನ್ನು ಪಡೆಯಲು ಪ್ರಯತ್ನಿಸುತ್ತದೆ.
ಒಂದು ವೇಳೆ ಪಕ್ಷಕ್ಕೆ ಸಂಪೂರ್ಣ ಬಹುಮತ ಸಿಗದಿದ್ದಲ್ಲಿ ಬಿಜೆಪಿ, ಜೆಡಿಎಸ್ಗೆ ಬೆಂಬಲ ನೀಡಿ ಎಚ್ಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಿದೆ. ವೈದ್ಯಕೀಯ ತಪಾಸಣೆಗಾಗಿ ಸಿಂಗಾಪುರದಲ್ಲಿದ್ದ ಎಚ್ಡಿ ಕುಮಾರಸ್ವಾಮಿ ಅವರು ಶನಿವಾರ ಬೆಳಗ್ಗೆ ಮನೆಗೆ ಮರಳಿದ್ದಾರೆ. ಮೈತ್ರಿಯ ಬಗ್ಗೆ ಯಾವ ರಾಷ್ಟ್ರೀಯ ಪಕ್ಷಗಳ ನಾಯಕರು ತಮ್ಮನ್ನು ಸಂಪರ್ಕಿಸಿಲ್ಲ ಎಂದಿದ್ದಾರೆ.
ಎರಡೂ ರಾಷ್ಟ್ರೀಯ ಪಕ್ಷಗಳು ಸರ್ಕಾರ ರಚನೆಗೆ ಸಜ್ಜಾಗುತ್ತಿದ್ದು, ಈ ಕದನದಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.