ರಾಜ್ಯ

ಮೆಟ್ರೋ ಬಂದರೂ ತಪ್ಪಲ್ಲ ಬೆಂಗಳೂರು ಟ್ರಾಫಿಕ್ ಗೊಡವೆ!

Srinivasamurthy VN

ಬೆಂಗಳೂರು: ಬೆಂಗಳೂರು ಟ್ರಾಫಿಕ್ ಗೆ ರಾಮಬಾಣ ಎಂದೇ ಕರೆಯಲಾಗುತ್ತಿದ್ದ ಬಹು ನಿರೀಕ್ಷಿತ ನಮ್ಮ ಮೆಟ್ರೋ ಆಗಮನದಿಂದಾಗಿ ಟ್ರಾಫಿಕ್ ಸಮಸ್ಯೆ ಮೇಲೆ ಅಂತಹ  ಪ್ರಯೋಜನಗಳಾಗುವುದಿಲ್ಲ ಎಂದು ಟ್ರಾಫಿಕ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇನ್ನೇನು ಉದ್ಯಾನ ನಗರಿಯ ಜನರಿಗೆ ಸೇವೆ ಸಲ್ಲಿಸಲು ನಮ್ಮ ಮೆಟ್ರೋ ಸಿದ್ಧವಾಗಿರುವಂತೆಯೇ ಮೆಟ್ರೋ ರೈಲಿನ ಪ್ರಸ್ತುತತೆ ಮತ್ತು ಅದರಿಂದ ಟ್ರಾಫಿಕ್ ಸಮಸ್ಯೆ ಮೇಲೆ ಆಗಬಹುದಾದ  ಪ್ರಯೋಜನಗಳ ಕುರಿತು ಚರ್ಚೆ ಎದ್ದಿದೆ. ಹಿರಿಯ ಟ್ರಾಫಿಕ್ ತಜ್ಞರೊಬ್ಬರು ಅಭಿಪ್ರಾಯಪಟ್ಟಂತೆ ಪ್ರಸ್ತುತ ನಮ್ಮ ಮೆಟ್ರೋದಿಂದಾಗಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಮೇಲೆ ಅಂತಹ ಗಂಭೀರ  ಪರಿಣಾಮಗಳೇನೂ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಮ್ಮ ಮೆಟ್ರೋದ ಮೂಲನಕ್ಷೆಯನ್ನು ಗಮನಿಸಿದರೆ, ಕೆಲವು ನಿರ್ಧಿಷ್ಟ ಪ್ರದೇಶಗಳಲ್ಲಿ ಮಾತ್ರ ಟ್ರಾಫಿಕ್ ಸಮಸ್ಯೆಗೆ ಉತ್ತರ ಸಿಗಬಹುದು. ಆದರೆ ಒಟ್ಟಾರೆ ಮೆಟ್ರೋದಿಂದಾಗಿ ಟ್ರಾಫಿಕ್ ಸಮಸ್ಯೆ  ಮೇಲೆ ಅಂತಹ ಗಂಭೀರ ಪರಿಣಾಮವೇನೂ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. "ಪ್ರಸ್ತುತ ಬೆಂಗಳೂರಿನಲ್ಲಿರುವ ವಾಹನ ಸಂಖ್ಯೆಗೂ ಮತ್ತು ಅವುಗಳಿಗಿರುವ ರಸ್ತೆಗಳ ಸಂಖ್ಯೆಗೂ  ಅಜಗಜಾಂತರ ವ್ಯತ್ಯಸವಿದ್ದು, ಪ್ರತಿನಿತ್ಯ 2 ಲಕ್ಷಕ್ಕೂ ಅಧಿಕ ನೂತನ ವಾಹನಗಳು ರಸ್ತೆಗಿಳಿಯುತ್ತಿವೆ. ಹೀಗಾಗಿ ವಾಹಗಳ ಸಂಖ್ಯೆಗಳನ್ನು ನಿಯಂತ್ರಿಸದ ಹೊರತು ಟ್ರಾಫಿಕ್ ಸಮಸ್ಯೆ  ಬಗೆಹರಿಯುವುದಿಲ್ಲ. ಪ್ರಸ್ತುತ ಮೆಟ್ರೋ ಸಂಚರಿಸುತ್ತಿರುವ ಬಹುತೇಕ ಭಾಗಗಳಲ್ಲಿ ಅಂದರೆ ನಾಯಂಡಹಳ್ಳಿ ಜಂಕ್ಷನ್, ಬೈಯ್ಯಪ್ಪನ ಹಳ್ಳಿ, ಒಕಳಿ ಪುರಂ ಜಂಕ್ಷನ್, ಎಂಜಿ ರಸ್ತೆಯಂತಹ  ಪ್ರದೇಶಗಳಲ್ಲೇ ಇಂದಿಗೂ ಟ್ರಾಫಿಕ್  ಯಥಾಸ್ಥಿತಿಯಲ್ಲೇ ಇದೆ. ಮೆಟ್ರೋ ಪ್ರಸ್ತುತ ಒಂದು ರೀತಿ ಪ್ರವಾಸಿ ಕೇಂದ್ರವಾಗಿದೆಯಷ್ಟೇ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಮತ್ತೋರ್ವ ಟ್ರಾಫಿಕ್ ಪೋಲೀಸರೊಬ್ಬರು ಅಭಿಪ್ರಾಯಪಟ್ಟಂತೆ "ನಾನು ಕೂಡ ಸಾಕಷ್ಟು ಬಾರಿ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದೇನೆ. ನಾವು ನಿರೀಕ್ಷಿಸಿದಷ್ಟು ಜನ ಮೆಟ್ರೋ ರೈಲಿನಲ್ಲಿ  ಪ್ರಯಾಣ ಮಾಡುತ್ತಿಲ್ಲ. ಹೀಗಾಗಿ ಮೆಟ್ರೋ ಬಂದರೂ ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಪರಿಹಾರ ದೊರೆಯುವುದಿಲ್ಲ. ದೀರ್ಘವಾಧಿ ಕಾಲದಲ್ಲಿ ಚಿಂತಿಸುವುದಾದರೆ ಟ್ರಾಫಿಕ್ ಸಮಸ್ಯೆಗೆ  ಮೆಟ್ರೋ ಬಹುತೇಕ ಅಲ್ಲದಿದ್ದರೂ, ಒಂದು ರೀತಿಯಲ್ಲಿ ನೆರವಾಗಬಹುದು. ನನ್ನ ವೈಯುಕ್ತಿಕ ಅಭಿಪ್ರಾಯ ಹೇಳುವುದಾದರೆ ಮೆಟ್ರೋ ರೈಲು ನಿಗಮ ಬೆಂಗಳೂರಿನ ಅತ್ಯಂತ ಹೆಚ್ಚು ಟ್ರಾಫಿಕ್  ದಟ್ಟಣೆ ಇರುವ ಪ್ರದೇಶಗಳಲ್ಲಿ ನಿರಂತರವಾಗಿ ಮೆಟ್ರೋ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು. ಆಗ ಬಹುಶಃ ಟ್ರಾಫಿಕ್ ಸಮಸ್ಯೆಗೆ ಉತ್ತರ ದೊರೆಯಬಹುದು" ಎಂದು ಅವರು  ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT