ರಾಜ್ಯ

ತಲೆಕೂದಲು ಒಣಗಿಸಲು ಹೋಗಿ 8ನೇ ಮಹಡಿಯ ಕಿಟಕಿಯಿಂದ ಬಿದ್ದು ಬಾಣಂತಿ ಸಾವು

Shilpa D

ಬೆಂಗಳೂರು: ಒದ್ದೆ ಕೂದಲನ್ನು ಒಣಗಿಸಲು ಹೋದ ಸಾಫ್ಟ್ ವೇರ್ ಎಂಜಿನೀಯರ್ ಆಕಸ್ಮಿಕವಾಗಿ ಕಾಲು ಜಾರಿ 8ನೇ ಮಹಡಿಯ ಬಾಲ್ಕನಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹೊಸೂರು ರಸ್ತೆಯ ಬೇಗೂರು ಮುಖ್ಯರಸ್ತೆಯ ನಿವಾಸಿ ಚಂದನಾ ನಾಗೇಶ್ ಮೃತ ಮಹಿಳೆ. ಈಕೆ ಆರು ದಿನಗಳ ಹಿಂದಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದರು.

ಯೆಲೆನಹಳ್ಳಿಯ ಗೇಟೆಡ್ ಕಮ್ಯೂನಿಟಿಯಲ್ಲಿರುವ ಎಸ್ ಎನ್ ಎನ್ ರಾಜ್ ಸೆರೆನಿಟಿ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದ ಚಂದನಾ ನಾಗೇಶ್ ನಿನ್ನೆ ಸಂಜೆ 6.30ರ ವೇಳೆಯಲ್ಲಿ ತಮ್ಮ ಬೆಡ್ ರೂಮಿನ ಬಾಲ್ಕನಿಯಲ್ಲಿ ನಿಂತು ತಲೆ ಕೂದಲನ್ನು ಒಣಗಿಸುತ್ತಿದ್ದರು ಈ ವೇಳೆ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದಾರೆ.

ಮೈಸೂರಿನ ಚಂದನಾ ಮಂಡ್ಯ ಮೂಲದ ಅಭಿಲಾಷ್ ಗೌಡ ಅವರನ್ನು ಎರಡೂವರೆ ವರ್ಷದ ಹಿಂದೆ ವಿವಾಹವಾಗಿದ್ದರು, ಚಂದನಾ ಅತ್ತೆ ಮತ್ತು, ಆಕೆಯ ಅಮ್ಮ, ಮತ್ತೊಂದು ಕೊಠಡಿಯಲ್ಲಿ ನವಜಾತ ಶಿಶುವಿನ ಆರೈಕೆಯಲ್ಲಿದ್ದರು, ಚಂದನ ಮೇಲಿಂದ ಬಿದ್ದಿರುವುದು ಅವರ ಗಮನಕ್ಕೆ ಬಂದಿರಲಿಲ್ಲ. ಸೆಕ್ಯೂರಿಟಿ ಗಾರ್ಡ್ ಬಂದು ವಿಷಯ ತಿಳಿಸಿದ ನಂತರ ಎಚ್ಚೆತ್ತು ಕೊಂಡಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿಯ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಚಂದನಾ ಹೆರಿಗೆ ರಜೆಯ ಮೇಲೆ ಮನೆಯಲ್ಲಿದ್ದರು. 13 ಮಹಡಿಗಳಿರುವ ಊ ಅಪಾರ್ಟ್ ಮೆಂಟ್ ನಲ್ಲಿ ಎಲ್ಲಾ ಫ್ಲಾಟ್ ಗಳ ಕಿಟಕಿಗಳಿಗೂ ಗಾಜಿನ ಬಾಗಿಲು ಅಳವಡಿಸಲಾಗಿದೆ. ಕಳೆದ 8 ತಿಂಗಳ ಹಿಂದೆ ಚಂದನಾ ಕುಟುಂಬ ಅಪಾರ್ಟ್ ಮೆಂಟ್ ಅನ್ನು ಬಾಡಿಗೆಗೆ ಪಡೆದು ವಾಸವಿದ್ದರು.

 ಇನ್ನೂ ಈ ಸಂಬಂಧ ನಿವಾಸಿಗಳ ಸಭೆ ಕರೆದಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು ಇಂಥಹ ಘಟನೆ ಸಂಭವಿಸಿದಂತೆ ಅವಶ್ಯಕವಾಗಿರುವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.

SCROLL FOR NEXT