ರಾಜ್ಯ

ಅಕ್ರಮ ಒತ್ತುವರಿ: ಭಾನುವಾರವೂ ಮುಂದುವರೆದ ಕಾರ್ಯಾಚರಣೆ

Srinivasamurthy VN

ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳುನ ಶನಿವಾರದಿಂದ ನಡೆಸುತ್ತಿರುವ ಅಕ್ರಮ ಭೂ ಮತ್ತು ರಾಜಾ ಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಭಾನುವಾರವೂ ಮುಂದುವರೆದಿದ್ದು,  ಮಹದೇವಪುರ, ಕೈಗೊಂಡನಹಳ್ಳಿ ಮತ್ತು ಕಸವನಹಳ್ಳಿಯಲ್ಲಿ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ.

ಶನಿವಾರ ಆರಂಭಗೊಂಡಿದ್ದ ಒತ್ತುವರಿ ಕಾರ್ಯಾಚರಣೆಯನ್ನು ಭಾನುವಾರವೂ ಮುಂದುವರೆಸಿದ ಬಿಬಿಎಂಪಿ ಅಧಿಕಾರಿಗಳು ಮಹದೇವಪುರ ವ್ಯಾಪ್ತಿಯಲ್ಲಿ, ಕೈಗೊಂಡನಹಳ್ಳಿ ಮತ್ತು  ಕಸವನಹಳ್ಳಿಯಿಂದ ಚೋಳಕೆರೆವರೆಗೂ ತೆರವು ಕಾರ್ಯಾಚರಣೆ ನಡೆಸಿದರು. ಈ ವೇಳೆ ರಾಜಾಕಾಲುವೆ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ 2 ಅಪಾರ್ಟ್ ಮೆಂಟ್ ಹಾಗೂ ನಾಲ್ಕು ಮನೆಗಳನ್ನು  ನೆಲಸಮಗೊಳಿಸಿದರು.

ಬೊಮ್ಮನಹಳ್ಳಿ ವಲಯದ ಅವಾನಿ ಶೃಂಗೇರಿ, ಅರಕೆರೆಗಳಲ್ಲಿ ಕಾರ್ಯಾಚರಣೆ ಮುಂದುವರಿದಿದ್ದು, ದಿಢೀರ್ ಕಾರ್ಯಾಚರಣೆ ನಡೆಸುತ್ತಿರುವ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಮನೆ  ಕಳೆದುಕೊಂಡ ನಿವಾಸಿಗಳು ಹಿಡಿ ಶಾಪಹಾಕಿದರು. ಇತ್ತೀಚೆಗಷ್ಟೇ ನಿರ್ಮಾಣವಾದ ಮತ್ತು ಇನ್ನೂ ಗೃಹ ಪ್ರವೇಶ ಕೂಡ ಆಗದ ಐಶಾರಾಮಿ ಮನೆ ಕೂಡ ಒತ್ತುವರಿ ಕಾರ್ಯಾಚರಣೆಯಿಂದಾಗಿ  ನೆಲಸಮವಾಗಿದ್ದು, ಮನೆಯ ಮಾಲೀಕರು ಸುಮಾರು 2.3 ಕೋಟಿ ಖರ್ಚು ಮಾಡಿ ಮನೆ ನಿರ್ಮಿಸಿದ್ದರು ಎಂದು ಹೇಳಲಾಗುತ್ತಿದೆ.

ಮನೆಯನ್ನು ಜೆಸಿಬಿ ಮೂಲಕ ಕೆಡವುತ್ತಿದ್ದಂತೆಯೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮನೆ ಮಾಲೀಕರು ಅವರೊಂದಿಗೆ ವಾಕ್ಸಮರ ನಡೆಸಿದರು. ಈ ವೇಳೆ ಪೊಲೀಸರು ಮಧ್ಯ  ಪ್ರವೇಶಿಸಿದರೂ ಸುಮ್ಮನಾಗದ ಮನೆ ಮಾಲೀಕರು, ಅಧಿಕಾರಿಗಳಿಗೆ ಶಾಪಹಾಕುತ್ತಲೇ ಕಣ್ಣೀರಿಟ್ಟರು.

SCROLL FOR NEXT