ಬೆಂಗಳೂರು: ಮದ್ಯಪಾನ ಮಾಡಿ ಶಾಲಾ ವಾಹನ ಚಲಾಯಿಸುತ್ತಿದ್ದ ಚಾಲಕನನ್ನು ಬಂಧಿಸಿ ವ್ಯಾನನ್ನು ವಶಪಡಿಸಿಕೊಂಡಿರುವ ಘಟನೆ ಬೆಂಗಳೂರಿನ ಹಲಸೂರು ಗೇಟ್ ವ್ಯಾಪ್ತಿಯಲ್ಲಿ ನಿನ್ನೆ(ಗುರುವಾರ) ನಡೆದಿದೆ.
ವಾನ್ ಡ್ರೈವರ್ ಮಂಜು, ಬಿಷಪ್ ಕಾಟನ್ ಶಾಲೆಯ 30ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಕರೆದುಕೊಂಡು ನಿನ್ನೆ ಬೆಳಗ್ಗೆ 7.30ರ ಸುಮಾರಿಗೆ ನೃಪತುಂಗ ರಸ್ತೆಯಲ್ಲಿ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗುತ್ತಿದ್ದ. ಆಗ ಹಲಸೂರು ಗೇಟ್ ಸಂಚಾರಿ ಠಾಣೆ ಪೊಲೀಸರು ತಡೆದು ನಿಲ್ಲಿಸಿ ವಿಚಾರಿಸಿದಾಗ ಪಾನಮತ್ತನಾಗಿರುವುದು ಗೊತ್ತಾಯಿತು. ವ್ಯಾನಿನಲ್ಲಿ ಮಿತಿಗಿಂತ ಜಾಸ್ತಿ ಮಕ್ಕಳನ್ನು ಕೂರಿಸಿಕೊಂಡು ಹೋಗುತ್ತಿದ್ದ. ಆತನ ಬಳಿ ಚಾಲನೆ ಪರವಾನಗಿ ಪತ್ರ ಕೂಡ ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ನಾವು ವಾಹನವನ್ನು ವಶಪಡಿಸಿಕೊಂಡು ಚಾಲಕನನ್ನು ಬಂಧಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪ್ರಸ್ತುತ ಮೋಟಾರು ವಾಹನ ಕಾಯ್ದೆ ಪ್ರಕಾರ ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ 2 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಆದರೆ ಇತ್ತೀಚೆಗೆ ಸಂಸತ್ತಿನಲ್ಲಿ ಮಂಡಿಸಲಾದ 2016ನೇ ಸಾಲಿನ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸಿದವರಿಗೆ 10 ಸಾವಿರ ದಂಡ ವಿಧಿಸಬೇಕೆಂದು ಪ್ರಸ್ತಾಪಿಸಲಾಗಿದೆ.
ನಗರದಲ್ಲಿ ಮದ್ಯ ಸೇವಿಸಿ ಶಾಲಾ ವಾಹನ ಚಲಾಯಿಸಿದ ಚಾಲಕರನ್ನು ಬಂಧಿಸುತ್ತಿರುವ ಪ್ರಕರಣ ಈ ತಿಂಗಳಲ್ಲಿ ಇದು ಎರಡನೆಯದ್ದು. ಇತ್ತೀಚೆಗೆ ಆಡುಗೋಡಿ ಪೊಲೀಸರು ಅಮಲಿನಲ್ಲಿ ಮಕ್ಕಳನ್ನು ಹೇರಿಕೊಂಡು ಶಾಲಾ ಬಸ್ಸು ಚಲಾಯಿಸುತ್ತಿದ್ದ ಚಾಲಕನನ್ನು ಬಂಧಿಸಿದ್ದರು.