ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷಕ್ಕೆ ರಾಜ್ಯ ಪಠ್ಯಕ್ರಮದ ಪುಸ್ತಕಗಳನ್ನೇ ಬಳಸಲಾಗುವುದು ಹೊರತು ಎನ್ ಸಿಇಆರ್ ಟಿ ಪಠ್ಯಕ್ರಮದ ಪುಸ್ತಕಗಳನ್ನಲ್ಲ ಎಂದು ಮುಖ್ಯಮಂತ್ರಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಈ ವರ್ಷಾಂತ್ಯಕ್ಕೆ ಎಲ್ಲಾ ಭಾಷಾ ಅಧ್ಯಯನ ಪರಿಷ್ಕೃತ ಪಠ್ಯಪುಸ್ತಕಗಳು ಮುದ್ರಣಕ್ಕೆ ಸಿದ್ದವಾಗಲಿದ್ದು ಇತರ ಪಠ್ಯಪುಸ್ತಕಗಳು ಜನವರಿ ಮಧ್ಯಭಾಗದ ಹೊತ್ತಿಗೆ ಸಿದ್ಧವಾಗಲಿದೆ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.
ಈ ಮೂಲಕ ಪಠ್ಯಪುಸ್ತಕ ಮುದ್ರಣ ಮತ್ತು ಪೂರೈಕೆಯಲ್ಲಿನ ಗೊಂದಲಗಳಿಗೆ ತೆರೆ ಎಳೆದಂತಾಗಿದ್ದು, ಪ್ರೊ.ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ಪುನರಾವರ್ತನೆ ತಂಡಕ್ಕೆ ಜಯ ಸಿಕ್ಕಂತಾಗಿದೆ.
ಪರಿಷ್ಕೃತ ಪಠ್ಯಪುಸ್ತಕಗಳು ಮುದ್ರಣಕ್ಕೆ ಹೋಗಿ ಬರುವಷ್ಟು ಹೊತ್ತಿಗೆ ವಿಳಂಬವಾಗುವುದರಿಂದ ಮುಂದಿನ ವರ್ಷ ಎನ್ ಸಿಐಆರ್ ಟಿ ಪುಸ್ತಕಗಳನ್ನು ಮತ್ತು 2018-19ರಿಂದ ರಾಜ್ಯ ಪಠ್ಯಕ್ರಮದ ಪುಸ್ತಕಗಳನ್ನು ಬಳಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಈ ಹಿಂದೆ ತಿಳಿಸಿದ್ದರು.