ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣ (ಸಂಗ್ರಹ ಚಿತ್ರ)
ಬೆಂಗಳೂರು: ಕಾರ್ಯಕ್ರಮವೊಂದರಲ್ಲಿ ಇಂಗ್ಲೀಷ್ ಮಾತನಾಡಿದ್ದಕ್ಕೆ ಟೆಕ್ಕಿಯೊಬ್ಬರನ್ನು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಅಟ್ಟಾಡಿಸಿ ಥಳಿಸಿರುವ ಘಟನೆ ಹಳೆ ಮದ್ರಾಸು ರಸ್ತೆಯ ಸ್ವಾಮಿ ವಿವೇಕಾನಂದ ಮೆಟ್ರೋ ರೈಲು ನಿಲ್ದಾಣದಲ್ಲಿ ನಡೆದಿದೆ.
ಜೆ.ಡ್ಯಾನಿಯಲ್ ಎಂಬ ಟೆಕ್ಕಿ ಥಳಿತಕ್ಕೊಳಗಾದ ವ್ಯಕ್ತಿಯಾಗಿದ್ದು, ಕರವೇ ಹಾಗೂ ಕಾರ್ಯಕ್ರಮದ ಆಯೋಜಕರ ನಡುವೆ ವಾಗ್ವಾದ ನಡೆದಾಗ ಮಧ್ಯಪ್ರವೇಶಿಸಿ ಇಂಗ್ಲೀಷ್ ನಲ್ಲಿ ಮಾತನಾಡಿದ ಪರಿಣಾಮ ಡ್ಯಾನಿಯಲ್ ಗೆ ಥಳಿಸಲಾಗಿದೆ ಎಂದು ತಿಳಿದುಬಂದಿದೆ. ಸ್ವಾಮಿ ವಿವೇಕಾನಂದ ಮೆಟ್ರೋ ರೈಲು ನಿಲ್ದಾಣದ ಕೆಳ ಭಾಗದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಆಯೋಜಕರು ಕನ್ನಡ ಹಾಡುಗಳನ್ನು ಹಾಕದೇ ಇದ್ದದ್ದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪರಿಣಾಮ ಕಾರ್ಯಕ್ರಮದ ಆಯೋಜಕರು ಹಾಗೂ ಕರವೇ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ, ಈ ನಡುವೆ ಮಧ್ಯಪ್ರವೇಶಿಸಿದ ಡ್ಯಾನಿಯಲ್ ಇಂಗ್ಲೀಷ್ ನಲ್ಲಿ ಕರವೇ ಕಾರ್ಯಕರ್ತರೊಂದಿಗೆ ಮಾತನಾಡಲು ಪ್ರಾರಂಭಿಸಿದ್ದಾರೆ. ಆಕ್ರೋಶಗೊಂಡ 50 ಜನರ ಗುಂಪಿನ ಕರವೇ ಕಾರ್ಯಕರ್ತರು ಡ್ಯಾನಿಯಲ್ ಗೆ ಥಳಿಸಿದ್ದಾರೆ. ದಾಳಿಗೆ ಪ್ರತಿಯಾಗಿ ಡ್ಯಾನಿಯಲ್ ಸಹ ಕರವೇ ಕಾರ್ಯಕರ್ತರಿಗೆ ಥಳಿಸಿದ್ದು ಮತ್ತಷ್ಟು ಆಕ್ರೋಶಗೊಂಡ ಕರವೇ ಕಾರ್ಯಕರ್ತರು ಡ್ಯಾನಿಯಲ್ ಕೈ ಕಟ್ಟಿಹಾಕಿ ಥಳಿಸಲು ಪ್ರಾರಂಭಿಸಿದ್ದಾರೆ. ಗಸ್ತು ತಿರುಗುತ್ತಿದ್ದ ಪೊಲೀಸ್ ಪಡೆಗೆ ಘಟನೆ ಕಣ್ಣಿಗೆ ಬಿದ್ದಿದ್ದು, ಡ್ಯಾನಿಯಲ್ ನ್ನು ಥಳಿತದಿಂದ ಪಾರು ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮಂಜುನಾಥ್ ನೇತೃತ್ವದ ಕರವೇ ತಂಡದ ಸದಸ್ಯರನ್ನು ಬೈಯ್ಯಪ್ಪನ ಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸಲಾಗುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos