ರಾಜ್ಯ

ಮಂಡ್ಯ: ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಜೋಡಿ ಕೊಲೆ

Shilpa D

ಮಂಡ್ಯ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ನಡೆದಿದೆ.

ನೆಲಮಾಕನಹಳ್ಳಿಯ ಸಿದ್ದೇಗೌಡ ಎಂಬುವರ ಪತ್ನಿ ಶರಾವತಿ ಹಾಗೂ ಸತೀಶ್ ಎಂಬವರನ್ನು ಮಾರಕಾಸ್ತ್ರಗಳಿಂದ ಹತ್ಯೆ ಮಾಡಲಾಗಿದೆ.  ಕಳೆದ 7 ವರ್ಷಗಳಿಂದ ಸತೀಶ್ ಮತ್ತು ಶರಾವತಿ ಅನೈತಿಕ ಸಂಬಂಧ ಹೊಂದಿದ್ದರು. ನಿನ್ನೆ ಬೆಳಗಿನ ಜಾವ 1.15 ರ ಸಮಯದಲ್ಲಿ ಮನೆಗೆ ನುಗ್ಗಿದ ತಂಡವೊಂದು ಈ ಜೋಡಿಯ ಮೇಲೆ ಹಲ್ಲೆ ನಡೆಸಿದೆ. ಸತೀಶ್ ಅಲ್ಲಿಂದ ಓಡಲು ಯತ್ನಿಸಿದಾಗ ಆತನ ಹೊಟ್ಟೆಗೆ ಹಾಗೂ  ಎದೆಗೆ ಇರಿದು ಕೊಲ್ಲಲಾಗಿದೆ. ನಂತರ ಶರಾವತಿಯ ಕತ್ತು ಸೀಳಿ ಹತ್ಯೆ ಮಾಡಲಾಗಿದೆ. ಈ ವೇಳೆ ತನ್ನ ತಾಯಿಯನ್ನು ಬಂದ 11 ವರ್ಷದ ಬಾಲಕನನ್ನು ತಳ್ಳಿದ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

ಆರೋಪಿಗಳು ಮುಖಕ್ಕೆ ಮಾಸ್ಕ್ ಧರಿಸಿ  ಬಂದಿದ್ದು ಕಾರಿನಲ್ಲಿ ಪರಾರಿಯಾದರು ಎಂದು ಶರಾವತಿ ಪುತ್ರ ಹೇಳಿಕೆ ನೀಡಿದ್ದಾನೆ. ಚೊಟ್ಟನಹಳ್ಳಿ ಗ್ರಾಮದ ಶರಾವತಿ 15 ವರ್ಷಗಳ ಹಿಂದೆ ಸಿದ್ದೇಗೌಡ ಎಂಬಾತನನ್ನು ವಿವಾಹವಾಗಿದ್ದಳು, 2009 ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಸಿದ್ದೇಗೌಡ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.

ಸಿದ್ದೇಗೌಡನ ಜಮೀನಲ್ಲಿ ಕೆಲಸ ಮಾಡುವ ಸತೀಶ್ ಎಂಬಾತನ ಜೊತೆ ಶರಾವತಿಗೆ ಅನೈತಿಕ ಸಂಬಂಧವಿತ್ತು. ಶರಾವತಿಗೆ ಇಬ್ಬರು ಮಕ್ಕಳಿದ್ದು, 13 ವರ್ಷದ ಮಗಳು ಶನಿವಾರ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದಳು. ಇಬ್ಬರ ಶವಗಳನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಬೆರಳಚ್ಚು ಸೇರಿದಂತೆ ಹಲವು ಸಾಕ್ಷಿಗಳನ್ನು ಸಂಗ್ರಹಿಸಿದ್ದಾರೆ.

SCROLL FOR NEXT