ಮೈಸೂರು: ಎಲ್ಲರೂ ಸಮಾನರು ಎಂದು ಸದಾ ಹೇಳುವ ಸಮಾಜವಾದಿ ಸಿದ್ದರಾಮಯ್ಯ ತಮ್ಮ ಆಪ್ತ ಸಹಾಯಕನ ಕೈಯ್ಯಿಂದ ಶೂ ಹಾಕಿಸಿಕೊಂಡಿರುವುದು ಎಲ್ಲೆಡೆ ತೀವ್ರ ಚರ್ಚೆಗೆ ಕಾರಣವಾಗಿದೆ.
ಮೈಸೂರಿನಲ್ಲಿ ಹಿರಿಯ ನಟ ಚೇತನ್ ರಾಮ್ ರಾವ್ ನಿಧನದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮೃತರ ಅಂತಿಮ ದರ್ಶನ ಪಡೆಯಲು ರಾಮ್ರಾವ್ ಅವರ ಮನೆಗೆ ತೆರಳಿದ್ದರು.ರಾಮ್ರಾವ್ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಮನೆಯಿಂದ ಹೊರಬಂದ ಸಿದ್ದರಾಮಯ್ಯ, ಹೊರಗೆ ಬಿಟ್ಟಿದ್ದ ಶೂ ಅನ್ನು ತಮ್ಮ ಆಪ್ತ ಸಹಾಯಕ ಕುಮಾರ್ ಅವರಿಂದ ಸಾರ್ವಜನಿಕರ ಎದುರಲ್ಲೇ ಹಾಕಿಸಿಕೊಂಡರು. ಆತ ಎಲ್ಲರ ಎದುರು ಶೂ ಹಾಕುತ್ತಿದ್ದರು ಸಿಎಂ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೇ ಸುಮ್ಮನೆ ನಿಂತಿದ್ದರು.
ಸಿಎಂ ಯಾವತ್ತೂ ಈ ರೀತಿ ಮಾಡಿರಲಿಲ್ಲ, ಆದರೆ ಸಾರ್ವಜನಿಕವಾಗಿ ಸಿಎಂ ಶೂ ಹಾಕಿಸಿಕೊಂಡಿದ್ದು ಸರಿಯಾಗಿ ಕಾಣಿಸುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ. ದುಬಾರಿ ಬೆಲೆಯ ಹ್ಯೂಬ್ಲಾಟ್ ವಾಚ್ ಪ್ರಕರಣದ ನಂತರ ಸಿಎಂ ಸಿದ್ದರಾಮಯ್ಯ ಅವರ ಸಮಾಜವಾದದ ಮತ್ತೊಂದು ಮುಖ ಅನಾವರಣಗೊಂಡಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.
ಇನ್ನೂ ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಿಎಂ ಕಚೇರಿ, ಸಿದ್ದರಾಮಯ್ಯ ಅವರಿಗೆ ಶೂ ಹಾಕಿದ್ದು, ಸರ್ಕಾರಿ ಅಧಿಕಾರಿ ಅಲ್ಲ, ಸಿದ್ದರಾಮಯ್ಯ ಅವರ ಸಂಬಂಧಿ ಕುಮಾರ್ ಎಂಬುವರು ಶೂ ಹಾಕಿದ್ದು ಎಂದು ಸ್ಪಷ್ಟನೆ ನೀಡಿದೆ.