ರಾಜ್ಯ

ಮಾಜಿ ಎಂಎಲ್ ಸಿ ಇ.ಕೃಷ್ಣಪ್ಪ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

Manjula VN

ಬೆಂಗಳೂರು: ಸರ್ಕಾರಿ ಶಾಲೆಯೊಂದನ್ನು ನೆಲಸಮ ಮಾಡಿ ಆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿ ವಿಧಾನ ಪರಿಷತ್ ಮಾಜಿ ಸದಸ್ಯ ಇ.ಕೃಷ್ಣಪ್ಪ ಹಾಗೂ ಹಿಂದಿನ ಕ್ಷೇತ್ರದ ಶಿಕ್ಷಣಾಧಿಕಾರಿ ನರಸಿಂಹಮೂರ್ತಿ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಶುಕ್ರವಾರ ಆರೋಪಪಟ್ಟಿ ಸಲ್ಲಿಸಿದ್ದಾರೆ.

ನಗರದ ಗ್ರಾಮಾಂತರ ಜಿಲ್ಲೆಯಾಗಿರುವ ಅಡಕಮಾರನಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 16/2ರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡಿರುವ ಇ. ಕೃಷ್ಣಪ್ಪ ಅವರು ಶಾಲೆಯನ್ನು ನೆಲಸಮಗೊಳಿಸಿ, ಆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆಂದು ಹೇಳಿ ಎಂ. ಭಾಸ್ಕರ್ ಎಂಬುವವರು 2014ರ ಆಗಸ್ಟ್ ತಿಂಗಳಿನಲ್ಲಿ ಲೋಕಾಯುಕ್ತದಲ್ಲಿ ದೂರೊಂದನ್ನು ದಾಖಲಿಸಿದ್ದರು.

ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಾಲಯವು ಮೂವರು ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಿತ್ತು. ಇದರಂತೆ ತನಿಖೆ ನಡೆಸಿರುವ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಇ. ಕೃಷ್ಣಪ್ಪ ಹಾಗೂ ನರಸಿಂಹಮೂರ್ತಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದಾರೆ.

ಬೆಂಗಳೂರು ಉತ್ತರ ವಲಯ-4 ಕ್ಷೇತ್ರ ಸಂಪನ್ಮೂಲಕ ಅಧಿಕಾರಿ ಎಲ್. ಕೃಷ್ಣಪ್ಪ, ಶಿಕ್ಷಣ ಸಂಯೋಜಕ ಕಪ್ಪಣ್ಣ, ಸಿ.ಆರ್.ಪಿ ಆಗಿರುವ ಪಿ. ರಾಧಾ ಅವರು ಸರ್ಕಾರದ ಆಸ್ತಿ ರಕ್ಷಿಸುವಲ್ಲಿ ಕರ್ತವ್ಯ ಲೋಪ ಎಸಗಿದ್ದಾರೆ. ಹೀಗಾಗಿ ಈ ಎಲ್ಲಾ ಅಧಿಕಾರಿಗಳ ವಿರುದ್ಧವೂ ಇಲಾಖಾ ತನಿಖೆ ನಡೆಸಬೇಕೆಂದು ಸರ್ಕಾರಕ್ಕೆ ಲೋಕಾಯುಕ್ತ ಪೊಲೀಸರು ವರದಿ ಸಲ್ಲಿಸಿದ್ದಾರೆ.

6 ಗುಂಟೆ ಭೂಮಿಯಲ್ಲಿ ಸರ್ಕಾರಿ ಶಾಲೆಯಿತ್ತು. ಶಾಲೆಯ ಪಕ್ಕದಲ್ಲೇ ವಿಧಾನ ಪರಿಷತ್ ಮಾಜಿ ಸದಸ್ಯ ಇ.ಕೃಷ್ಣಪ್ಪ ಅವರ ನಿವಾಸವಿದೆ. ಭೂಮಿ ಸರ್ಕಾರಕ್ಕೆ ಸಂಬಂಧಿಸಿದ್ದು ಎಂಬುದು ಕೃಷ್ಣಪ್ಪ ಅವರಿದೆ ತಿಳಿದಿತ್ತು. ಹೀಗಿದ್ದರೂ ಶಾಲೆಯನ್ನು ನೆಲಸಮಗೊಳಿಸಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಬೇಲಿ ಹಾಕಿಕೊಂಡಿದ್ದಾರೆಂದು ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ.

ಮನೆಯ ಬಳಿ ಸ್ವಲ್ಪ ಜಾಗವಿತ್ತು. ಇದರಂತೆ ಶಾಲೆ ನಿರ್ಮಾಣ ಮಾಡುತ್ತಿದ್ದಾಗ ಆ ಜಾಗವನ್ನು ನೀಡಿದ್ದೆ ಎಂದು ಇ.ಕೃಷ್ಣಪ್ಪ ಅವರು ಹೇಳಿದ್ದಾರೆ.

SCROLL FOR NEXT