ಕೊಡಗು: ಹಿರಿಯ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಕಿರುಕುಳದಿಂದ ನೊಂದು ಆತ್ಮಹತ್ಯೆಗೆ ಶರಣಾದ ಮಂಗಳೂರು ಐಜಿಪಿ ಕಚೇರಿಯ ಡಿವೈಎಸ್ಪಿ ಎಂ.ಕೆ.ಗಣಪತಿ ಅವರ ಮನೆಗೆ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಅವರು ಭೇಟಿ ನೀಡಿ, ಗಣಪತಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಇಂದು ಮಧ್ಯಾಹ್ನ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ರಂಗಸಮುದ್ರದಲ್ಲಿರುವ ಗಣಪತಿ ಅವರ ನಿವಾಸಕ್ಕೆ ತೆರಳಿ, ಅವರ ಪತ್ನಿ ಪಾವನ, ತಂದೆ ಕುಶಾಲಪ್ಪ ಹಾಗೂ ಮಗ ನೇಹಾಲ್ ಜತೆ ಚರ್ಚೆ ನಡೆಸಿದರು.
ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೀತಾರಾಂ ಅವರು, ರಾಜ್ಯ ಸರ್ಕಾರದ ಪರವಾಗಿ ನಾನು ಗಣಪತಿ ಮನೆಗೆ ಬಂದಿದ್ದೇನೆ ಮತ್ತು ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದೇನೆ ಎಂದರು.
ಗಣಪತಿಯ ಕುಟುಂಬ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿದೆ. ಆದರೆ ಡಿ.ಕೆ.ರವಿ ಪ್ರಕರಣವನ್ನು ಸಿಬಿಐಗೆ ನೀಡಿ ಒಂದು ವರ್ಷವಾದರೂ ವರದಿ ಬಂದಿಲ್ಲ. ಈಗಾಗಲೇ ಐದು ಪ್ರಕರಣಗಳನ್ನು ಸಿಬಿಐ ತನಿಖೆಗೆ ನೀಡಿದ್ದೇವೆ ಎಂದರು,
ಇನ್ನು ಪ್ರಕರಣದಲ್ಲಿ ಸರ್ಕಾರಕ್ಕೆ ಯಾರನ್ನೂ ರಕ್ಷಿಸುವ ಉದ್ದೇಶವಿಲ್ಲ ಸಚಿವ ಸೀತಾರಾಂ ಅವರು, ಕಾನೂನು ಪ್ರಕಾರವೇ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕರಣವನ್ನು ಈಗಾಗಲೇ ಸಿಐಡಿ ತನಿಖೆಗೆ ಒಪ್ಪಿಸಿದ್ದಾರೆ. ಆದರೆ ಪ್ರಕರಣದ ಬಳಿಕ ಹಲವಾರು ಬೆಳವಣಿಗೆಗಳು ನಡೆಯುತ್ತಿವೆ. ಕೊಡಗಿನ ಪುತ್ರರು ವೀರರು. ಅವರನ್ನು ರಾಜಕೀಯವಾಗಿ ಬಳಸಿಕೊಳ್ಳಬೇಡಿ ಎಂದು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಗಣಪತಿ ಅವರು ಮೂರು ವರ್ಷಗಳ ಕಾಲ ನನ್ನ ಕ್ಷೇತ್ರದಲ್ಲೇ ಇನ್ಸ್ ಪೆಕ್ಟರ್ ಆಗಿದ್ದರು. ವೈಯಕ್ತಿಕವಾಗಿ ಅವರ ಸಾವು ನೋವು ತಂದಿದೆ ಎಂದು ಸಚಿವರು ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos