ರಾಜ್ಯ

ರಾಜ್ಯದ ಅರಣ್ಯಾಧಿಕಾರಿಗಳಿಂದ ಜೂನಿಯರ್ ವೀರಪ್ಪನ್ ಕುಖ್ಯಾತಿಯ ಸರವಣನ್ ಬಂಧನ

Sumana Upadhyaya
ಮೈಸೂರು: ಜೂನಿಯರ್ ವೀರಪ್ಪನ್ ಎಂದೇ ಕುಖ್ಯಾತಿ ಪಡೆದಿದ್ದ ಸರವಣನ್ ಗೌಂಡರ್ ನನ್ನು ಅರಣ್ಯಾಧಿಕಾರಿಗಳು ನಿನ್ನೆ(ಗುರುವಾರ) ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಸೂರಿನ ಎಂಎಂ ಹಿಲ್ಸ್ ಅರಣ್ಯ ಸಮೀಪ ಪಲಾರ್ ಸೇತುವೆ ಬಳಿ ಆತನನ್ನು ಬಂಧಿಸಿದ್ದು, ಈ ವೇಳೆ ಆತನ ಬಳಿಯಿದ್ದ ಮಾಂಸ, ಒಂದು ನಾಡ ಬಂದೂಕು, ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಸರವಣನ್ ನ ಮೂವರು ಸಹಚರರಾದ ಪಳನಿ, ಗೋವಿಂದ ಮತ್ತು ಬಾಲು ತಪ್ಪಿಸಿಕೊಂಡು ಓಡಿ ಹೋಗುವಲ್ಲಿ ಯಶಸ್ವಿಯಾಗಿದ್ದಾರೆ.
ಒಂದು ಕಾಲದಲ್ಲಿ ಕಾಡುಗಳ್ಳ ವೀರಪ್ಪನ್ ಮೆರೆದಿದ್ದ ಮೈಸೂರಿನ ಮಲಮಹದೇಶ್ವರ ಬೆಟ್ಟದ ಸುತ್ತಮುತ್ತಲ ಕಾಡುಗಳಲ್ಲಿ ಸರವಣನ್ ಕೂಡ ತನ್ನ ಕಾರ್ಯವ್ಯಾಪ್ತಿಯನ್ನು ನಡೆಸುತ್ತಿದ್ದ. ಕರ್ನಾಟಕ-ತಮಿಳು ನಾಡಿನ ಗಡಿಭಾಗ ಗೋವಿಂದಪಾಡಿಯ ನಿವಾಸಿಯಾಗಿರುವ ಸರವಣನ್ ನಿನ್ನೆ ಕರ್ನಾಟಕದ ಗಡಿಯೊಳಗೆ ಅಕ್ರಮವಾಗಿ ಪ್ರವೇಶಿಸಿ ಜಿಂಕೆಯೊಂದನ್ನು ಬೇಟೆಯಾಡಿ ಕೊಂದು ಹಾಕಿದ್ದ.
ಆಗ ಕಾಡಿನಲ್ಲಿ ಗಸ್ತು ತಿರುಗುತ್ತಿದ್ದ ಅರಣ್ಯಾಧಿಕಾರಿಗಳು ಬಂದೂಕು ಸ್ಫೋಟದ ಸದ್ದು ಕೇಳಿ ಯಾರೋ ಬೇಟೆಯಾಡಿದ್ದಾರೆ ಎಂದು ಕೂಡಲೇ ಕಾರ್ಯಪ್ರವೃತ್ತರಾದರು. ಗೋಪಿನಾಥಮ್ -ಪಲಾರ್ ರಸ್ತೆ ಮಧ್ಯೆ 3 ಕಿಲೋ ಮೀಟರ್ ವರೆಗೆ ಮುಂಜಾನೆ ಜಾವ 3 ಗಂಟೆಗೆ ತಡೆಹಿಡಿದರು. ಆಗ ಸರವಣನ್ ಮಾಂಸವನ್ನು ಹೊತ್ತು ತರುತ್ತಿದ್ದ. 
ಹಾದಿಯಲ್ಲಿ ಆತನನ್ನು ತಡೆದ ಅರಣ್ಯಾಧಿಕಾರಿಗಳು ಬಂದೂಕು ಬಿಟ್ಟು ಶರಣಾಗುವಂತೆ ಆದೇಶ ನೀಡಿದರು. ತಪ್ಪಿಸಿಕೊಳ್ಳಲೆತ್ನಿಸಿದರೆ ಗುಂಡಿಕ್ಕಿ ಸಾಯಿಸುವುದಾಗಿ ಎಚ್ಚರಿಸಿದರು.
ಸರವಣನ್ ನ ಬಂಧನ ಕೆಲವು ಅರಣ್ಯ ಸಿಬ್ಬಂದಿಗೆ ಕೆಟ್ಟ ಸುದ್ದಿಯಾಗಬಹುದು. ಏಕೆಂದರೆ ಆತನೊಂದಿಗೆ ಸಂಪರ್ಕ ಹೊಂದಿದ್ದ ವಿಷಯ ಬಹಿರಂಗವಾಗಬಹುದು ಎಂದು.
ಕರ್ನಾಟಕದಲ್ಲಿ 6ಕ್ಕೂ ಹೆಚ್ಚು ಕೇಸುಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಸರವಣನ್ ಈ ಹಿಂದೆ ಜಾಮೀನಿನ ಮೇಲೆ ಹೊರಬಂದಿದ್ದ. ಆನೆಯೊಂದನ್ನು ಕೊಂದ ಮತ್ತು 2014ರಲ್ಲಿ ಅರಣ್ಯ ಚೆಕ್ ಪೋಸ್ಟ್ ಮೇಲೆ ದಾಳಿ ನಡೆಸಿದ ಕೇಸುಗಳೂ ಇವನ ಮೇಲಿವೆ.
ಸರವಣನ್ ನನ್ನು ಕೊಳ್ಳೆಗಾಲ ಕೋರ್ಟ್ ಗೆ ಹಾಜರುಪಡಿಸಿ ಚಾಮರಾಜನಗರ ಜೈಲಿಗೆ ಕಳುಹಿಸಲಾಗಿದೆ ಎಂದು ಕೊಳ್ಳೆಗಾಲ ವಿಭಾಗೀಯ ಅರಣ್ಯಾಧಿಕಾರಿ ಮಾಲತಿ ತಿಳಿಸಿದ್ದಾರೆ.
ಅರಣ್ಯಾಧಿಕಾರಿಗಳು ಸರವಣನ್ ನ ಮೊಬೈಲ್ ತೆಗೆದು ಹೊರ ಹೋದ ಮತ್ತು ಬಂದ ಕರೆಗಳನ್ನು ತೆಗೆದು ನೋಡುತ್ತಿದ್ದಾರೆ. ಈ ಮೂಲಕ ಆತ ಎಲ್ಲೆಲ್ಲಿ ಯಾರ ಜೊತೆ ಸಂಪರ್ಕ ಹೊಂದಿದ್ದ ಎಂಬ ವಿಷಯಗಳು ಗೊತ್ತಾಗುತ್ತವೆ. 
ಬಿಳಿಗಿರಿರಂಗ ವನ್ಯಮೃಗ ಅಭಯಾರಣ್ಯ ರಕ್ಷಕ ಲಿಂಗರಾಜು ಮತ್ತು ಇತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
SCROLL FOR NEXT