ರಾಜ್ಯ

ಅನುಮತಿಯಿಲ್ಲದೆಯೇ ಗರ್ಭಕೋಶ ತೆಗೆದ ವೈದ್ಯರು: ಸಿಎಂಗೆ ದೂರು ನೀಡಿದ ಮಹಿಳೆ

Manjula VN

ಮೈಸೂರು: ತನ್ನ ಅನುಮತಿ ಇಲ್ಲದೆಯೇ ಹಾಗೂ ತನಗೆ ಅರಿವಿಗೆ ಬಾರದೆ ಗರ್ಭಕೋಶ ತೆಗೆದ ವೈದ್ಯರ ವಿರುದ್ಧ ಕ್ರಮಕೈಗೊಳ್ಳುವಂತೆ ನೊಂದ ಮಹಿಳೆಯೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದಾರೆ.
 
ನಗರದ ಖಾಸಗಿ ಕಾರ್ಯಕ್ರಮವೊಂದಕ್ಕೆ ಸಿದ್ದರಾಮಯ್ಯ ಅವರು ಭೇಟಿ ನೀಡಿದ್ದ ಸಂದರ್ಭದಲ್ಲಿ ಮತ್ತೆ ಅವರನ್ನು ಭೇಟಿ ಮಾಡಿರುವ ಮಹಿಳೆ. ತಮಗಾದ ಅನ್ಯಾಯವನ್ನು ವಿವರಿಸಿದ್ದಾರೆ, ಇದರಂತೆ ವೈದ್ಯರ ವಿರುದ್ಧ ಕ್ರಮಗೊಳ್ಳುವಂತೆ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಮೈಸೂರಿನ ರಾಮಭಾಯಿನಗರದ ನಿವಾಸಿಯಾಗಿರುವ ನಂಜಮ್ಮ (38) ದೂರು ನೀಡಿದ ಮಹಿಳೆಯಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಒಂದೂವರೆ ವರ್ಷದ ಹಿಂದೆ ಅತೀವ ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ ಟಿ.ಕೆ.ಲೇಔಟ್ ನಲ್ಲಿರುವ ಕ್ಲಿನಿಕ್ ಒಂದರಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಆಪರೇಶನ್ ಮಾಡಬೇಕೆಂದು ಹೇಳಿದ್ದಾರೆ. ಇದರಂತೆ ಹಣವನ್ನು ಕಟ್ಟಿ ಆಪರೇಷನ್ ಮಾಡಿಸಿಕೊಂಡಿರುವ ನಂಜಮ್ಮ ಅವರಿಗೆ ಗರ್ಭಕೋಶ ತೆಗೆದಿರುವುದು ಅರಿವಿಗೇ ಬಂದಿಲ್ಲ.

ಗರ್ಭಕೋಶ ತೆಗೆಯುವ ಕುರಿತಂತೆ ವೈದ್ಯರು ಏನನ್ನೂ ಹೇಳಿರಲಿಲ್ಲ. ಆಪರೇಷನ್ ಆದ ನಂತರವೂ ನೋವು ಕಡಿಮೆಯಾಗಿರಲಿಲ್ಲ. ನಂತರ ಬೇರೆ ವೈದ್ಯರನ್ನು ಸಂಪರ್ಕಿಸಿದಾಗ ಗರ್ಭಕೋಶ ತೆಗೆದಿರುವುದು ತಿಳಿಯಿತು. ಇನ್ನು ಆಪರೇಷನ್ ಮಾಡಿದ ವೈದ್ಯರನ್ನು ಸಂಪರ್ಕಿಸಲು ಪ್ರಯತ್ನ ನಡೆಸಿದಾಗ ಅವರಿಂದ ಯಾವುದೇ ಪ್ರತಿಕ್ರಿಯೆಗಳು ಬರಲಿಲ್ಲ. ಅಲ್ಲಿನ ವೈದ್ಯರು ನನ್ನನ್ನು ಪ್ರಶ್ನೆಗಳನ್ನು ಕೇಳುವ ಮೂಲಕ ಅವಾಚ್ಯಗಳಿಂದ ನಿಂದಿಸಿದರು. ಹುಚ್ಚಿ ಎಂದು ಕರೆದರು ಎಂದು ನಂಜಮ್ಮ ಹೇಳಿಕೊಂಡಿದ್ದಾರೆ.

ಈ ಹಿಂದೆ ಏಪ್ರಿಲ್ ತಿಂಗಳಿನಲ್ಲಿ ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ಮಹಿಳೆ ತಮ್ಮ ನೋವನ್ನು ಹೇಳಿಕೊಂಡಿದ್ದರು, ಅಲ್ಲದೆ. ವೈದ್ಯರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು. ಇದರಂತೆ ಸರಸ್ವತಿಪುರಂ ಪೊಲೀಸರು ಮಹಿಳೆಗೆ ಹೊಸದಾಗಿ ದೂರೊಂದನ್ನು ದಾಖಲಿಸುವಂತೆ ತಿಳಿಸಿದ್ದರು. ದೂರು ದಾಖಲಿಸಿ ಹಲವು ದಿನಗಳು ಕಳೆದರೂ ಯಾವುದೇ ಬೆಳವಣಿಗೆ ಕಂಡು ಬರದ ಹಿನ್ನೆಲೆಯಲ್ಲಿ ಇದೀಗ ಮಹಿಳೆ ಮತ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.

SCROLL FOR NEXT