ರಾಜ್ಯ

ನಗರದ ಹೊರವಲಯದಲ್ಲೂ ಕೈಗಾರಿಕಾ ಕೇಂದ್ರಗಳನ್ನು ಸ್ಥಾಪಿಸಿ: ಆರ್.ವಿ. ದೇಶಪಾಂಡೆ

Manjula VN

ಬೆಂಗಳೂರು: ನಗರದ ಒಳವಲಯದಲ್ಲದೆ ರಾಜ್ಯದ ಇತರೆ ಪ್ರದೇಶಗಳಲ್ಲಿಯೂ ಕೈಗಾರಿಕಾ ಕ್ಷೇತ್ರಗಳನ್ನು ಸ್ಥಾಪಿಸುವಂತೆ ಕೈಗಾರಿಕೋದ್ಯಮಿಗಳಿಗೆ ಬೃಹತ್ ಕೈಗಾರಿಕಾ ಮತ್ತು ಮೂಲಸೌಕರ್ಯಗಳ ಸಚಿವ ಆರ್. ವಿ. ದೇಶಪಾಂಡೆಯವರು ಬುಧವಾರ ಹೇಳಿದ್ದಾರೆ.

ನಗರದಲ್ಲಿ ನಿನ್ನೆ ನಡೆದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್ ಕೆಸಿಸಿಐ) 99ನೇ ಸರ್ವಸದಸ್ಯರ ಮಹಾಸಭೆ ಹಾಗೂ ವಿಚಾರ ಸಂಕಿರಣದಲ್ಲಿ ಮಾತನಾಡಿರುವ ಅವರು, ಬೆಂಗಳೂರು ನಗರಾಂತರವಲ್ಲದೆ ಮೈಸೂರು, ಬೆಳಗಾವಿ, ಕಲಬುರ್ಗಿ, ಯಾದಗಿರಿ ಮತ್ತು ಹುಬ್ಬಳಿ-ಧಾರವಾಡ ಪ್ರದೇಶಗಳಲ್ಲೂ ಕೈಗಾರಿಕಾ ಕೇಂದ್ರಗಳನ್ನು ಸ್ಥಾಪಿಸುವಂತೆ ಕೈಗಾರಿಕೋದ್ಯಮಿಗಳಿಗೆ ಕರೆ ನೀಡಿದ್ದಾರೆ.

ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳು ಉತ್ತಮವಾಗಿದೆ. ಅಲ್ಲದೆ, ಬೆಂಗಳೂರಿಗೆ ಹೋಲಿಕೆ ಮಾಡಿದರೆ, ಅಲ್ಲಿನ ಭೂಮಿಯ ಬೆಲೆ ಕೂಡ ಕಡಿಮೆಯಿದೆ. ನಗರದೊಂದಿಗೆ ಇತರೆ ಪ್ರದೇಶಗಳಿಗೂ ಹೆಚ್ಚು ಪ್ರಾಮುಖ್ಯತೆಯನ್ನು ನೀಡಬೇಕು. ಮೆಟ್ರೋ ಸಂಪರ್ಕವನ್ನು ವಿಮಾನ ನಿಲ್ದಾಣಕ್ಕೂ ನೀಡಲು ಸರ್ಕಾರ ಯೋಜನೆ ರೂಪಿಸಿದೆ ಎಂದಿದ್ದಾರೆ.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯವು ಕೈಗಾರಿಕೆಯಲ್ಲೂ ಮುಂಚೂಣಿ ಸಾಧಿರುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ನಂತರ ಅತೀ ಹೆಚ್ಚು ಗಮನ ಸೆಳೆದಿರುವ ನಗರಗಳ ಸಾಲಿಗೆ ಬೆಂಗಳೂರು ಕೂಡ ಸೇರ್ಪಡೆಗೊಂಡಿದೆ. ಇನ್ವೆಸ್ಟ್ ಕರ್ನಾಟಕ ಸಮಾವೇಶವೇ ಕೊನೆಯದಲ್ಲ. ಈಗಷ್ಟೇ ಹೂಡಿಕೆಯ ಹೊಸ ಅಧ್ಯಾಯ ರಾಜ್ಯದಲ್ಲಿ ಆರಂಭವಾಗಿದೆ. ಇನ್ನು ಮುಂದೆಯೂ ಇನ್ವೆಸ್ ಕರ್ನಾಟಕ ಸಂಸ್ಥೆ ಇದನ್ನು ಮುಂದುವರೆಸಲಿದೆ ಎಂದಿದ್ದಾರೆ. ಅಲ್ಲದೆ, ಶತಮಾನೋತ್ಸವದ ಸಭಾಂಗಣ ನಿರ್ಮಾಣಕ್ಕಾಗಿ ರು. 10 ಕೋಟಿ ಹಣ ನೀಡಲು ಸರ್ಕಾರ ಸಿದ್ಧವಿದೆ ಎಂದಿರುವ ಅವರು, ಇದೇ ವೇಳೆ ರು. 5 ಕೋಟಿ ಹಣವನ್ನು ಚೆಕ್ ಮುಖಾಂತರ ಎಫ್ ಕೆಸಿಸಿಐಗೆ ನೀಡಿದರು.

SCROLL FOR NEXT