ಬೆಂಗಳೂರು: ಸರ್ಕಾರಿ ಶಾಲೆಗಳ ನಂತರ ಇದೀಗ ಸರ್ಕಾರಿ ಪದವಿಪೂರ್ವ ಕಾಲೇಜುಗಳನ್ನು ಮುಚ್ಚಬೇಕಾದ ಪರಿಸ್ಥಿತಿ ರಾಜ್ಯದಲ್ಲಿ ಬಂದಿದೆ. ಇದಕ್ಕೆ ಕಾರಣ ವಿದ್ಯಾರ್ಥಿಗಳ ಕೊರತೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ದಲಸನೂರು ಗ್ರಾಮದಲ್ಲಿರುವ ಸರ್ಕಾರಿ ಪದವಿಪೂರ್ವ ಕಲಾ ಕಾಲೇಜು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಲ್ಪಟ್ಟ ಮೊದಲ ಕಾಲೇಜು ಆಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಗೆ ಸಿಕ್ಕಿದ ಮಾಹಿತಿಯಿಂದ ತಿಳಿದುಬಂದಿದೆ. ದಾಸನಾಪುರ ಶ್ರೀನಿವಾಸಪುರದಿಂದ 10 ಕಿಲೋ ಮೀಟರ್ ದೂರದಲ್ಲಿದೆ.
20 ವರ್ಷಗಳ ಹಳೆಯ ಕಾಲೇಜಿನಲ್ಲಿ ಇತ್ತೀಚೆಗೆ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿತ್ತು. ಕಳೆದ ಶೈಕ್ಷಣಿಕ ವರ್ಷದಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿ ಕೂಡ ಈ ಕಾಲೇಜಿಗೆ ಪ್ರವೇಶ ಪಡೆದಿರಲಿಲ್ಲ.
ಸರ್ಕಾರಿ ಪದವಿಪೂರ್ವ ಕಾಲೇಜುಗಳ ಸ್ಥಿತಿಗತಿ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಇಲಾಖೆಯ ಅಧಿಕಾರಿಯೊಬ್ಬರನ್ನು ಸಂಪರ್ಕಿಸಿದಾಗ ತಿಳಿದುಬಂದ ವಿಷಯವೆಂದರೆ ಇಲ್ಲಿ ನೇಮಕಗೊಂಡಿರುವ ಬೋಧಕರೆಲ್ಲರೂ ಕೂಡ ಕೆಲಸ ಮಾಡದೆಯೂ ಸಂಬಳ ತೆಗೆದುಕೊಳ್ಳುತ್ತಾರೆ ಎಂಬುದು. ಪ್ರಾಂಶುಪಾಲರು ಕೂಡ ಏನೂ ಕೆಲಸ ಮಾಡದೆ ಸಂಬಳ ಪಡೆಯುತ್ತಾರೆ. ಇಲ್ಲಿನ ಉಪನ್ಯಾಸಕರನ್ನು ಹತ್ತಿರದ ಕಾಲೇಜುಗಳಿಗೆ ನಿಯೋಜನೆ ಮಾಡಿದ್ದೇವೆ. ಈ ವರ್ಷ ಕಾಲೇಜು ಮುಚ್ಚಲು ನಿರ್ಧರಿಸಿದ್ದೇವೆ ಎಂದಿದ್ದಾರೆ.
ಮುಚ್ಚಲ್ಪಟ್ಟ ಕಾಲೇಜಿನಲ್ಲಿ ಮೂಲಭೂತ ಸೌಕರ್ಯ ಉತ್ತಮವಾಗಿದೆ. ಕಟ್ಟಡವನ್ನು 5 ವರ್ಷಗಳ ಹಿಂದೆ ನವೀಕರಣ ಮಾಡಲಾಗಿತ್ತು. ಆದರೆ ವಿದ್ಯಾರ್ಥಿಗಳನ್ನು ಸೆಳೆಯುವಲ್ಲಿ ಮಾತ್ರ ವಿಫಲವಾಗಿತ್ತು.
ಕೋಲಾರ ಮತ್ತು ಶ್ರೀನಿವಾಸಪುರಗಳಲ್ಲಿ ಖಾಸಗಿ ಕಾಲೇಜುಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಸರ್ಕಾರಿ ಕಾಲೇಜುಗಳಿಗೆ ವಿದ್ಯಾರ್ಥಿಗಳು ಬಾರದೇ ಇರಲು ಕಾರಣವಾಗಿದೆ ಎನ್ನುತ್ತಾರೆ ಇದೇ ಕಾಲೇಜಿನ ಮಾಜಿ ಪ್ರಾಂಶುಪಾಲ.
ದಲಸನೂರಿನಲ್ಲಿ ಒಂದೇ ಒಂದು ಸರ್ಕಾರಿ ಕಾಲೇಜು ಇದೆ. ಕೋಲಾರ ಜಿಲ್ಲೆಯಲ್ಲಿ ಒಟ್ಟು 115 ಪಿಯು ಕಾಲೇಜುಗಳಿವೆ. ಅವುಗಳಲ್ಲಿ 32 ಅನುದಾನಿತ ಮತ್ತು ಉಳಿದವು ಖಾಸಗಿ ಕಾಲೇಜುಗಳಾಗಿವೆ.
ದಲಸನೂರು ಕಾಲೇಜು ಮಾತ್ರವಲ್ಲದೆ ಮುಂದಿನ ವರ್ಷದಲ್ಲಿ ಜಿಲ್ಲೆಯಲ್ಲಿ ಇನ್ನೂ ಕೆಲವು ಕಾಲೇಜುಗಳು ಮುಚ್ಚಲ್ಪಡಬಹುದು. ಕಡಿಮೆ ಪ್ರವೇಶ ಹೊಂದಿರುವ ಹಲವು ಕಾಲೇಜುಗಳು ರಾಜ್ಯದಲ್ಲಿವೆ. ಅವುಗಳನ್ನು ಗುರುತಿಸಬೇಕು ಎನ್ನುತ್ತಾರೆ ಅಧಿಕಾರಿಗಳು.
ಪದವಿಪೂರ್ವ ಶಿಕ್ಷಣ ಇಲಾಖೆ ನಿಯಮ ಪ್ರಕಾರ ಕಾಲೇಜುಗಳ ಮನ್ನಣೆ ನವೀಕರಣಕ್ಕೆ ಕನಿಷ್ಟ 40 ಮಕ್ಕಳು ಇರಬೇಕು.