ರಾಜ್ಯ

ಹಾವೇರಿ ಗೋಲಿಬಾರ್ ವರದಿ ತಿರಸ್ಕೃರಿಸಿದ ರಾಜ್ಯ ಸರ್ಕಾರ

Vishwanath S

ಬೆಂಗಳೂರು: 2008ರ ಹಾವೇರಿ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ. ಕೆದಂಬಾಡಿ ಜಗನ್ನಾಥಶೆಟ್ಟಿ ವಿಚಾರಣೆ ಆಯೋಗ ಸಲ್ಲಿಸಿದ್ದ ವರದಿಯ ಶಿಫಾರಸುಗಳನ್ನು ರಾಜ್ಯ ಸಚಿವ ಸಂಪುಟ ತಿರಸ್ಕರಿಸಿದೆ.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಸಗೊಬ್ಬರ ಹಾಗೂ ಬಿತ್ತನೆ ಬೀಜಕ್ಕಾಗಿ ಹಾವೇರಿಯಲ್ಲಿ ನಡೆದ ರೈತರ ಹೋರಾಟದ ವೇಳೆ ಪೊಲೀಸರು ಗೋಲಿಬಾರ್ ನಡೆಸಿದ್ದರು.

ಹಾವೇರಿ ಗೋಲಿಬಾರ್‌ ಪ್ರಕರಣದಲ್ಲಿ ಸತ್ತವನು ರೈತನೇ ಅಲ್ಲ, ಅದು ಗೊಬ್ಬರಕ್ಕಾಗಿ ನಡೆದ ಘರ್ಷಣೆಯಲ್ಲ, ರಾಜಕೀಯ ಕಾರಣಗಳಿಗಾಗಿ ನಡೆದದ್ದು ಎಂದು ವರದಿಯಲ್ಲಿ ತಿಳಿಸಿರುವುದರಿಂದ ಶಿಫಾರಸು ತಿರಸ್ಕರಿಸಲು ಸಂಪುಟ ನಿರ್ಧರಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ಅಂದಿನ ಬಿಜೆಪಿ ಸರ್ಕಾರವೇ ಮೃತಪಟ್ಟ ಸಿದ್ದಲಿಂಗಪ್ಪ ಚೆನ್ನಪ್ಪ ಚೂರಿ ರೈತ ಎಂಬುದನ್ನು ಒಪ್ಪಿಕೊಂಡಿದೆ. ಜತೆಗೆ ಆತನ ಕುಟುಂಬಕ್ಕೆ ಅದೇ ಆಧಾರದ ಮೇಲೆ ಪರಿಹಾರವನ್ನೂ ಸಹ ನೀಡಲಾಗಿದೆ. ಹೀಗಿರುವಾಗ ಆತ ರೈತನೇ ಅಲ್ಲ, ಗೊಬ್ಬರಕ್ಕಾಗಿ ಗಲಾಟೆ ನಡೆದಿಲ್ಲ ಎಂದು ಶಿಫಾರಸು ಮಾಡಿರುವುದರಿಂದ ಸಂಪುಟದಲ್ಲಿ ಚರ್ಚಿಸಿ ತಿರಸ್ಕರಿಸಲು ನಿರ್ಧರಿಸಲಾಯಿತು ಎಂದು ಹೇಳಿದರು. ಹಾಗಾದರೆ ಆ ಘಟನೆಯ ಬಗ್ಗೆ ಮುಂದೇನು ಎಂಬ ಪ್ರಶ್ನೆಗೆ, ಸಂಪುಟ ಸಭೆಯು ಶಿಫಾರಸು ತಿರಸ್ಕರಿಸುವ ತೀರ್ಮಾನ ಕೈಗೊಂಡಿದೆ. ಸದನದಲ್ಲಿ ಅದನ್ನು ಮಂಡಿಸಿ ತಿರಸ್ಕಾರ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಅಷ್ಟೆ ಎಂದರು.

SCROLL FOR NEXT