ಬೆಂಗಳೂರು: ಜೀತದಾಳುಗಳಿಂದ ಪುನರ್ವಸತಿಗಾಗಿ ಸಲ್ಲಿಕೆಯಾಗಿರುವ 7 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ಶೀಘ್ರದಲ್ಲೇ ಇತ್ಯರ್ಥಗೊಳಿಸಿ ಎಂದು ಗ್ರಾಮೀಣಾಬಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್ ಕೆ ಪಾಟೀಲ್ ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ರಾಷ್ಟ್ರೀಯ ಮಾನವಹಕ್ಕುಗಳ ಆಯೋಗ ಜಂಟಿಯಾಗಿ ಶುಕ್ರವಾರ ಏರ್ಪಡಿಸಿದ್ದ ಜೀತಪದ್ಧತಿ ನಿರ್ಮೂಲನೆ ಕುರಿತ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಪುನವರ್ಸತಿಗಾಗಿ ಸಲ್ಲಿಕೆಯಾಗಿರುವ ಸುಮಾರು 7,000ಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿದೆ ಎಂದ ಅವರು, ಕೂಡಲೇ ಆಯಾ ಜಿಲ್ಲಾ ಉಪ ಆಯುಕ್ತರು ಅರ್ಜಿಗಳನ್ನು ವಿಲೇವಾರಿ ಮಾಡಲು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ಕರ್ನಾಟಕದಲ್ಲಿ ಜೀತದಾಳು ಪದ್ಧತಿ ಉಳಿದುಕೊಂಡಿದೆ ಎಂದು ವಿವಿಧ ಏಜೆನ್ಸಿಗಳು ಹೇಳುತ್ತಿವೆ. ಹಾಗಾಗಿ, ರಾಜ್ಯದಲ್ಲಿ ಜೀತಪದ್ಧತಿ ನಿರ್ಮೂಲನೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಹಾಗೂ ಜೀತಪದ್ಧತಿಯಿಂದ ರಕ್ಷಿಸಲಾದ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಲಾಗುವುದು ಎಂದಿದ್ದಾರೆ.
ಜೀತಪದ್ಧತಿಯಿಂದ ಹೊರ ಬರುವ ವ್ಯಕ್ತಿ ತನ್ನ ಪಾಲಿನ ನೆರವನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ. ಕೇಂದ್ರದಿಂದ ಹಣ ಬರುವವರೆಗೆ ರಾಜ್ಯಕ್ಕೆ ತನ್ನ ಪಾಲಿನ ಹಣ ನೀಡುವ ಅಧಿಕಾರ ಇಲ್ಲ ಎಂದು ಅವರು ಹೇಳಿದ್ದಾರೆ.
ಈಗ ಜೀತದಿಂದ ಮುಕ್ತಗೊಳ್ಳುವ ವ್ಯಕ್ತಿಗೆ ಪರಿಹಾರ ರೂಪವಾಗಿ ತಲಾ ರು.20 ಸಾವಿರವನ್ನು ತಕ್ಷಣಕ್ಕೆ ನೀಡಲಾಗುತ್ತಿದೆ. ಈ ಹಣವನ್ನು ಮತ್ತಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಅವರು ತಿಳಿಸಿದ್ದಾರೆ.