ರಾಜ್ಯ

ಆಟೋಗೆ ಬಿಎಂಡಬ್ಲ್ಯೂ ಕಾರು ಡಿಕ್ಕಿ: ಕುಡಿದು ಚಾಲನೆ ಮಾಡಿದ ಸಾಮ್ರಾಟ್ ಛಡ್ಡಾ ಬಂಧನ

Lingaraj Badiger
ಬೆ೦ಗಳೂರು: ಕುಡಿದ ಮತ್ತಿನಲ್ಲಿ ತನ್ನ ಬಿಎಂಡಬ್ಲ್ಯೂ ಕಾರು ಚಾಲನೆ ಮಾಡಿ, ಆಟೋವೊಂದಕ್ಕೆ ಡಿಕ್ಕಿ ಹೊಡೆಸಿದ ಪ್ರತಿಷ್ಠಿತ ಯುಬಿ ಕ೦ಪನಿಯ ಉಪಾಧ್ಯಕ್ಷ ಸಾಮ್ರಾಟ್ ಛಡ್ಡಾನನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.
ಸಾಮ್ರಾಟ್ ಛಡ್ಡಾ ಕಳೆದ ಶನಿವಾರ ರಾತ್ರಿ ತನ್ನ ಕಾರನ್ನು ಅಡ್ಡಾದಿಡ್ಡಿ ಚಲಾಯಿಸಿ ಎದುರಿಗೆ ಬ೦ದ ಆಟೋಗೆ ಡಿಕ್ಕಿ ಹೊಡೆಸಿದ್ದು, ಪರಿಣಾಮ ಆಟೋ ಚಾಲಕ ಸೇರಿ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದವು. ಘಟನೆಯ ನಂತರ ತಲೆಮರೆಸಿಕೊಂಡಿದ್ದ ಛಡ್ಡಾನನ್ನು ಇಂದು ವಶಕ್ಕೆ ಪಡೆದಿರುವ ಇಂದಿರಾನಗರ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು, ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಮು೦ಬೈ ಮೂಲದ ಉದ್ಯಮಿ ಸಾಮ್ರಾಟ್ ಛಡ್ಡಾ ವಿರುದ್ಧ ಇದೀಗ ಇ೦ದಿರಾನಗರ ಸ೦ಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಛಡ್ಡಾ ಚಾಲನೆ ವೇಳೆ ಮದ್ಯಪಾನ ಮಾಡಿರುವುದು ಕಂಡುಬಂದಿದ್ದು, ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎ೦ದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 
ಶನಿವಾರ ಚಿನ್ನಸ್ವಾಮಿ ಕ್ರೀಡಾ೦ಗಣದಲ್ಲಿ ನಡೆದ ಐಪಿಎಲ್ ಕ್ರಿಕೆಟ್ ಪ೦ದ್ಯ ವೀಕ್ಷಿಸಿ ಕ೦ಠಪೂರ್ತಿ ಕುಡಿದ ರಾತ್ರಿ 11.10ರಲ್ಲಿ ಜಿ.ಎ೦.ಪಾಳ್ಯ ಮುಖ್ಯರಸ್ತೆಯಲ್ಲಿ ವಿರುದ್ಧ ದಿಕ್ಕಿನಿ೦ದ ಕಾರಿನಲ್ಲಿ ನುಗ್ಗಿದ ಸಾಮ್ರಾಟ್ ಮತ್ತೊ೦ದು ಕಾರನ್ನು ಹಿಂದಿಕ್ಕುವ ಭರದಲ್ಲಿ ಎದುರಿಗೆ ಬರುತ್ತಿದ್ದ ಆಟೋಗೆ ಡಿಕ್ಕಿ ಹೊಡೆದಿದ್ದಾರೆ. ಆಗ ಆಟೋದಲ್ಲಿದ್ದ ನಾಲ್ವರಿಗೆ ಗಾಯವಾಗಿದ್ದು, ಆಟೋ ಸಂಪೂರ್ಣ ಜಖಂ ಆಗಿದೆ. ಗಾಯಾಳುಗಳನ್ನು ಕೂಡಲೇ ಸ್ಥಳೀಯರ ಸಹಾಯದಿಂದ  ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. 
SCROLL FOR NEXT