ಮೈಸೂರು: ಕಳೆದ ಮೇ 15ರಂದು ಮೃತಪಟ್ಟಿದ್ದ ಮಹಿಳೆಯೊಬ್ಬರು ಶವಸಂಸ್ಕಾರ ನಡೆಸುತ್ತಿದ್ದ ವೇಳೆಯೇ ಕಣ್ಣು ತೆರೆದ ಅಚ್ಚರಿಯ ಘಟನೆ ಮೈಸೂರು ನಗರದ ಅಗ್ರಹಾರದಲ್ಲಿ ನಡೆದಿದೆ.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮೈಸೂರಿನ ಆಭರಣ ವ್ಯಾಪಾರಿ ಮಹೇಂದ್ರ ಕುಮಾರ್ ಅವರ ಪತ್ನಿ ಪದ್ಮಾ ಲೋಡಾ ಎಂಬ ಮಹಿಳೆಯನ್ನು ಮೇ 16ರಂದು ನಾರಾಯಣಶಾಸ್ತಿ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು, ಮಹಿಳೆ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದು, ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದರು.
ನಂತರ ಕುಟುಂಬದ ಒಪ್ಪಿಗೆ ಮೇರೆಗೆ ವೈದ್ಯರು 59 ವರ್ಷದ ಮಹಿಳೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ ವೈದ್ಯರ ಮಾತನ್ನು ತಪ್ಪಾಗಿ ಅರ್ಥ ಮಾಡಿಕೊಂಡ ಪದ್ಮಾ ಮನೆಯವರು ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದರು.
ಮಂಗಳವಾರ ಪದ್ಮಾ ಲೋಡಾ ಅವರ ಶವಸಂಸ್ಕಾರ ನಡೆಸುತ್ತಿದ್ದ ವೇಳೆ ಕಣ್ಣು ಬಿಟ್ಟಿರುವ ಅಚ್ಚರಿಯ ಘಟನೆ ನಡೆದಿದೆ. ಮರು ಜೀವ ಪಡೆದ ಪದ್ಮಾರನ್ನು ಕೂಡಲೇ ಮತ್ತೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಖಾಸಗಿ ವಾಹಿನಿ ವರದಿ ಮಾಡಿದೆ.