ರಾಜ್ಯ

ಚಪ್ಪಲಿ ಹಾಕಿಕೊಂಡು ದೇವಸ್ಥಾನ ಪ್ರವೇಶ: ಜೈಲಿನಲ್ಲೇ ಬಡಿದಾಡಿಕೊಂಡ ಕೈದಿಗಳು

Shilpa D

ಬೆಂಗಳೂರು: ಚಪ್ಪಲಿ ಹಾಕಿಕೊಂಡು ದೇವಸ್ಥಾನ ಪ್ರವೇಶಿಸಿದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ 2 ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಮೂವರು ವಿಚಾರಣಾಧೀನ ಕೈದಿಗಳು ಗಾಯಗೊಂಡಿದ್ದಾರೆ.

ಜಗದೀಶ ಅಲಿಯಾಸ್ ಕೆಆರ್ಎಸ್ ಜಗ್ಗ, ಬಸವರಾಜ ಹಾಗೂ ಚೇತನ್ ಗಾಯಗೊಂಡವರು. ಮೂವರು ಜೈಲು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹುಬ್ಬಳ್ಳಿಯ ಚರ್ಚ್‌ ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಜಾಫರ್ ಹಾಗೂ ಆತನ ಸಹಚರರು ಈ ಮೂವರ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆ ಸಂಬಂಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ದೀಪಾವಳಿ ಹಬ್ಬದ ಪ್ರಯುಕ್ತ ಜೈಲು ಆವರಣದ ಗಣೇಶ ದೇವಸ್ಥಾನದಲ್ಲಿ ಕೈದಿಗಳು ದೀಪಾಲಂಕಾರ ಮಾಡಿದ್ದರು. ಸಂಜೆ 5.30ರ ಸುಮಾರಿಗೆ ಜಗ್ಗ ಸಹಚರರೊಂದಿಗೆ ದೇವಾಲಯದ ಒಳಗಿದ್ದ. ಈ ಸಂದರ್ಭದಲ್ಲಿ ಜಾಫರ್‌ನ ಸಹಚರರು ಆವರಣದಲ್ಲಿ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ  ಚೆಂಡು ದೇವಸ್ಥಾನದ ಒಳಗೆ ಹೋಗಿದೆ. ಈ ವೇಳೆ ಒಬ್ಬಾತ, ಚಪ್ಪಲಿ ಹಾಕಿಕೊಂಡೇ ಒಳಗೆ ಹೋಗಿ ಚೆಂಡು ತಂದಿದ್ದಾನೆ. ಇದರಿಂದ ಕುಪಿತಗೊಂಡ ಜಗ್ಗ ಹಾಗೂ ಸಹಚರರು, ಆತನನ್ನು ಅಡ್ಡಗಟ್ಟಿ ಮಾತಿನ ಚಕಮಕಿ ನಡೆಸಿದ್ದಾರೆ. ಆಗ ಜಾಫರ್ ಸಹಚರರ ಜತೆ ಸ್ಥಳಕ್ಕೆ ಬಂದಿದ್ದು, ಎರಡೂ ಗುಂಪುಗಳ ನಡುವೆ ಗಲಾಟೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇಕ್ಬಾಲ್ ಮತ್ತು ಜಗದೀಶ್ ಇಬ್ಬರಿಗೂ ಮಾನಸಿಕ ಕಾಯಿಲೆಯಿದ್ದು, ಇಬ್ಬರನ್ನು ಸೆಕ್ಯೂರಿಟಿ ಬ್ಲಾಕ್ ನಲ್ಲಿಡಲಾಗಿದೆ.  ಸಂಜೆ ಸುಮಾರು 7 ಗಂಟೆ ವೇಳೆಗೆ ಊಟಕ್ಕಾಗಿ ಇಬ್ಬರು ಬರುವಾಗ ಕಾರಿಡಾರ್ ನಲ್ಲಿ  ಯಾವುದೇ ಕಾರಣವಿಲ್ಲದೇ ಬಡಿದಾಡಿಕೊಂಡಿದ್ದಾರೆ ಎಂದು ಜೈಲಿನ ಮುಖ್ಯ  ಅಧೀಕ್ಷಕ ಕೃಷ್ಣ ಕುಮಾರ್ ತಿಳಿಸಿದ್ದಾರೆ.

SCROLL FOR NEXT