ಆನೆ ಸಿದ್ದನನ್ನು ಎದ್ದು ನಿಲ್ಲಿಸುತ್ತಿರುವುದು
ಬೆಂಗಳೂರು: ಕೊನೆಗೂ ಗಾಯಾಳು ಸಿದ್ದ ಆನೆಯನ್ನು ಸುಮಾರು 60 ದಿನಗಳ ನಂತರ ಕ್ರೇನ್ ಸಹಾಯಿಂದ ಎದ್ದು ನಿಲ್ಲಿಸಲಾಗಿದ್ದು, ಸಿದ್ದನ ಉಳಿವಿಗೆ ಕೊನೆಯ ಪ್ರಯತ್ನ ಎಂಬಂತೆ ಕಬ್ಬಿಣದ ಗೋಡೆಗಳ ನಡುವೆ ‘ಬಂಧಿಸಿ’ ಚಿಕಿತ್ಸೆ ನೀಡಲು ವೈದ್ಯರ ತಂಡ ಮುಂದಾಗಿದೆ.
ಭಾರತೀಯ ಸೇನೆಯ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್(ಎಂಇಜಿ) ಯೋಧರು ಮಂಚನಬೆಲೆಯಲ್ಲಿ ಆನೆಯ ಚಿಕಿತ್ಸೆಗೆ ಅನುವಾಗುವಂತೆ ಬೃಹತ್ತಾದ ಕಬ್ಬಿಣದ ಕಂಬಗಳಿಂದ ಚೌಕಾಕಾರದ ಗೋಪುರವನ್ನು ನಿರ್ಮಿಸಿದ್ದಾರೆ.
ತುರ್ತು ಸಂದರ್ಭಗಳಲ್ಲಿ ಸೇತುವೆಯನ್ನು ನಿರ್ಮಿಸಲು ಬಳಸಲಾಗುವ ಸಾಮಗ್ರಿಗಳನ್ನು ಬಳಸಿಕೊಂಡು ಯೋಧರು ಈ ವ್ಯವಸ್ಥೆ ಮಾಡಿಕೊಂಡಿದ್ದು, ಇಂದು ಕ್ರೇನ್ ಮೂಲಕ ಚೌಕಾಕಾರದ ಆಕೃತಿಯ ಮಧ್ಯ ಸಿದ್ಧನನ್ನು ನಿಲ್ಲಸಲಾಗಿದೆ.
ಸಿದ್ದನನ್ನು ಕಬ್ಬಿಣದ ಕಂಬಿಗಳಿಂದ ಕಟ್ಟಿ ಹಾಕಲಾಗಿದ್ದು, ಆನೆ ಯಾವುದೇ ಕಾರಣಕ್ಕೂ ನೆಲಕ್ಕೆ ಕೂರದಂತೆ ನೋಡಿಕೊಂಡು, ನಿಂತ ಭಂಗಿಯಲ್ಲಿಯೇ ಅದಕ್ಕೆ ಚಿಕಿತ್ಸೆ ಮುಂದುವರಿಸಲು ವೈದ್ಯರ ತಂಡ ನಿರ್ಧರಿಸಿದೆ.
ಸದ್ಯ ಆನೆಯು 15 ದಿನಗಳಿಂದಲೂ ಮಲಗಿದ ಭಂಗಿಯಲ್ಲಿಯೇ ಇದೆ. ಇದರಿಂದ ಅದರ ದೇಹದ ಒಂದು ಭಾಗದಲ್ಲಾಗುವ ಬದಲಾವಣೆಯು ನಮಗೆ ಗೋಚರವಾಗುತ್ತಿಲ್ಲ. ಅಲ್ಲದೆ ಆನೆಗೆ ಬಹುಮುಖ್ಯವಾಗಿ ಕಿವಿಗಳನ್ನು ಅಲುಗಾಡಿಸಲು ಆಗದಂತಾಗಿದೆ. ಕಾಲು ನೆಟ್ಟಗೆ ಇರದ ಕಾರಣ ಕೀವು ಕೆಳಗೆ ಇಳಿಯುತ್ತಿಲ್ಲ. ಇದರಿಂದ ರಕ್ತಪರಿಚಲನೆ ನಿಧಾನವಾಗಿದೆ. ಇವೆಲ್ಲವೂ ಚಿಕಿತ್ಸೆಗೆ ಅಡ್ಡಿಯಾಗಿವೆ ಎಂದು ಬನ್ನೇರುಘಟ್ಟದ ವೈದ್ಯ ಡಾ. ಅರುಣ್ ಅವರು ಮಾಧ್ಯಮಕ್ಕೆ ತಿಳಿಸಿದ್ದರು.
ಆನೆಯು ನಿಂತ ಭಂಗಿಯಲ್ಲಿಯೇ ಚಿಕಿತ್ಸೆ ನೀಡುವುದರಿಂದ ಅದು ಚೇತರಿಕೆ ಕಾಣುವ ಸಾಧ್ಯತೆಗಳು ಇವೆ. ಈ ನಿಟ್ಟಿನಲ್ಲಿ ಈ ಹೊಸ ಪ್ರಯತ್ನಕ್ಕೆ ವೈದ್ಯರ ತಂಡ ಮುಂದಾಗಿದೆ.
ಆಗಸ್ಟ್ 30ರಂದು ಆಹಾರ ಹರಸಿ ಸಾವನದುರ್ಗ ಕಾಡಿನಿಂದ ಬನ್ನೇರುಘಟ್ಟ ಅರಣ್ಯಕ್ಕೆ ತೆರಳುವ ವೇಳೆ ನಾಡಿಗೆ ಬಂದ ಆನೆ ಸಿದ್ದ ಬೆಂಗಳೂರು ದಕ್ಷಿಣ ತಾಲೂಕು ಗೋಪಾಲಪುರದ ಬಳಿಯ ಕಾಲುವೆಯಲ್ಲಿ ಇಳಿದು ಮುಂಭಾಗದ ಬಲಗಾಲಿಗೆ ಪೆಟ್ಟು ಮಾಡಿಕೊಂಡಿತ್ತು.ನಂತರ ಸೆಪ್ಟೆಂಬರ್ 3ರಿಂದ ಮಾಗಡಿಯ ಮಂಚನಬೆಲೆ ಜಲಾಶಯದ ಹಿನ್ನೀರಿನಲ್ಲೇ ಆನೆ ವಾಸ್ತವ್ಯವಿತ್ತು. ಆನೆಗೆ ಸ್ಥಳೀಯ ಅರಣ್ಯ ಇಲಾಖೆ ಚಿಕಿತ್ಸೆ ನೀಡಿತ್ತಾದರೂ ಅದು ಉಪಯೋಗವಾಗಿಲ್ಲ. ಕಳೆದ ಕೆಲ ದಿನಗಳಿಂದ ಹಿನ್ನೀರನಲ್ಲೇ ಕಾಲ ಕಳೆಯುತ್ತಿರುವ ಆನೆಯ ಆರೋಗ್ಯ ದಿನೇ, ದಿನೇ ಕುಸಿಯುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos