ಬೆಳಗಾವಿ: ಗ್ರಾಮೀಣ ಪ್ರದೇಶಗಳಲ್ಲಿನ ಆರೋಗ್ಯ ಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್ ವಿಧಾನ ಪರಿಷತ್ತಿನಲ್ಲಿ ನಿನ್ನೆ ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಹೃದ್ರೋಗ ಸಮಸ್ಯೆಗಳಿಂದ ಬಳಲುತ್ತಿರುವವರು ದೊಡ್ಡ ನಗರಗಳಲ್ಲಿ ಚಿಕಿತ್ಸೆಗೆ ತೆರಳಬೇಕಾಗಿ ಬರುವುದರಿಂದ ತಾಲೂಕು ಕೇಂದ್ರಗಳಲ್ಲಿ ತೀವ್ರ ನಿಗಾ ಘಟಕಗಳನ್ನು ಸ್ಥಾಪಿಸುವ ಆಲೋಚನೆಯಿದೆ. ಗ್ರಾಮೀಣ ಮಟ್ಟದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ದೊರಕುವಂತೆ ಮಾಡಲು ಪೂರ್ಣ ಪ್ರಮಾಣದ ಐಸಿಯು ಘಟಕಗಳನ್ನು ಎಲ್ಲಾ 147 ತಾಲ್ಲೂಕುಗಳಲ್ಲಿ ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಪ್ರತಿ ಐಸಿಯು ಘಟಕದಲ್ಲಿ ಮೂರು ಬೆಡ್ ಗಳು ಮತ್ತು ವೆಂಟಿಲೇಟರ್ ಸೌಲಭ್ಯಗಳಿರುತ್ತವೆ.
ಈ ಇಡೀ ಯೋಜನೆಗೆ ಜಯದೇವ ಹೃದ್ರೋಗ ಆಸ್ಪತ್ರೆಯ ಸಹಕಾರವನ್ನು ಪಡೆಯಲಾಗುವುದು. ಉದ್ದೇಶಿತ ಐಸಿಯು ಘಟಕಗಳಲ್ಲಿ ಟೆಲಿ ಮೆಡಿಸಿನ್ ಸೌಲಭ್ಯಗಳಿರುತ್ತವೆ. ಅದನ್ನು ಜಯದೇವ ಸಂಸ್ಥೆಗೆ ಸಂಪರ್ಕಿಸಲಾಗುತ್ತದೆ ಅಲ್ಲಿನ ಹೃದ್ರೋಗ ತಜ್ಞರು ಚಿಕಿತ್ಸೆಯ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಚಳಿಗಾಲ ಅಧಿವೇಶನದಲ್ಲಿ, ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಪತ್ರದಲ್ಲಿರುವುದನ್ನು ಓದಿಹೇಳಿದರು. ಜಯದೇವ ಹೃದ್ರೋಗ ಸಂಸ್ಥೆಯ ಅಧ್ಯಕ್ಷ ಡಾ.ಸಿ.ಎನ್.ಮಂಜುನಾಥ್ ಅವರು ಅಂದಾಜು ಲೆಕ್ಕ ಹಾಕಿ ಪ್ರತಿ ಐಸಿಯು ಘಟಕಕ್ಕೆ ಸುಮಾರು 27 ಲಕ್ಷ ವೆಚ್ಚವಾಗಲಿದೆ. ಸ್ಥಳೀಯ ಶಾಸಕರು ಮತ್ತು ಸಂಸದರಿಂದ ತಲಾ ಸುಮಾರು 20 ಲಕ್ಷ ರೂಪಾಯಿ ಸಂಗ್ರಹಿಸಲಾಗುವುದು. ಜಿಲ್ಲಾಧಿಕಾರಿ ಈ ಸಂಬಂಧ ಸ್ಥಳೀಯ ಜನಪ್ರತಿನಿಧಿಗಳಿಗೆ ಪತ್ರ ಬರೆಯಲಿದ್ದಾರೆ. ಕೇಂದ್ರ ಸರ್ಕಾರದ ಆರೋಗ್ಯ ಅಭಿಯಾನದಡಿ ಉಳಿದ ಹಣವನ್ನು ಕೇಳಲಾಗುವುದು. ಕೇಂದ್ರ ಸರ್ಕಾರ ಈಗಾಗಲೇ ಯೋಜನೆಗೆ ಅಸ್ತು ನೀಡಿದೆ ಎಂದು ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos