ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ(ಕೆಎಸ್ ಒಯು)ದ ಹಣಕಾಸು ಅವ್ಯವಹಾರ ಸಂಬಂಧ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಎಸ್ ರಂಗಪ್ಪ ಹಾಗೂ ಇತರ ಏಳು ಮಂದಿ ವಿರುದ್ಧದ ಎಫ್ಐಆರ್ ರದ್ದುಗೊಳಿಸಲು ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ.
ಪ್ರೊ.ರಂಗಪ್ಪ ಹಾಗೂ ಇತರರು ತಮ್ಮ ವಿರುದ್ಧದ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆನಂದ್ ಬೈರಾರೆಡ್ಡಿ ಅವರು ವಜಾಗೊಳಿಸಿದ್ದಾರೆ. ಅಲ್ಲದೆ ಆರೋಪಿಗಳ ವಿರುದ್ಧದ ಎಫ್ಐಆರ್ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿ ಮುಂದಿನ ತನಿಖೆಗೆ ಅವಕಾಶ ನೀಡಿದ್ದಾರೆ.
ವಿವಿಯಲ್ಲಿ ನಡೆದಿದೆ ಎನ್ನಲಾಗಿರುವ ಹಣಕಾಸು ಅವ್ಯವಹಾರದಲ್ಲಿ ಸದ್ಯ ಮೈಸೂರು ವಿವಿ ಕುಲಪತಿಯಾಗಿರುವ ಹಾಗೂ ಮಾಜಿ ಕೆಎಸ್ ಒಯು ಕುಲಪತಿ ಪ್ರೊ, ಕೆ.ಎಸ್. ರಂಗಪ್ಪ ಸೇರಿ 7 ಮಂದಿ ವಿರುದ್ಧ ಕೆಎಸ್ ಒಯುನ ಹಣಕಾಸು ಅಧಿಕಾರಿ ಮೈಸೂರಿನ ಜಯಲಕ್ಷ್ಮೀಪುರಂ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.
ಕೆಎಸ್ ಒಯು ನ ಹಣಕಾಸು ಅವ್ಯವಹಾರ ಸಂಬಂಧ ರಾಜ್ಯಪಾಲ ವಜೂಬಾಯಿ ವಾಲಾ ಅವರು ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಡಾ. ಭಕ್ತವತ್ಸಲ ಅವರನ್ನು ತನಿಖೆಗೆ ನೇಮಕ ಮಾಡಿದ್ದರು. ತನಿಖೆ ನಡೆಸಿದ ಭಕ್ತವತ್ಸಲ ಅವರು ಅವ್ಯವಹಾರ ನಡೆದಿರುವುದು ಸತ್ಯ ಎಂದು ವರದಿ ನೀಡಿದ ಬಳಿಕ ರಾಜ್ಯಪಾಲರ ಸೂಚನೆಯಂತೆ ಪೊ.ರಂಗಪ್ಪ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರೊ.ಕೆ.ಎಸ್.ರಂಗಪ್ಪ, ವಿಶ್ರಾಂತ ಕುಲಪತಿ ಪ್ರೊ.ಎಂ.ಜಿ.ಕೃಷ್ಣನ್, ಅಧ್ಯಯನ ಕೇಂದ್ರಗಳ ಡೀನ್ ಪ್ರೊ.ಟಿ.ಡಿ.ದೇವೇಗೌಡ, ಉಪಕುಲಸಚಿವ ರಾಮನಾಥನ್, ಕುಲಸಚಿವ ಪ್ರೊ.ಪಿ.ಎಸ್.ನಾಯಕ್, ಹಿಂದಿನ ಕುಲಸಚಿವ ಪ್ರೊ.ಬಿ.ಎಸ್.ವಿಶ್ವನಾಥ ಹಾಗೂ ಐಟಿ ವಿಭಾಗದ ನಿರ್ದೇಶಕ ಡಾ.ಕಮಲೇಶ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos