ಬೆಂಗಳೂರು: ಅನುಮಾನಸ್ಪದವಾಗಿ ಅಕ್ರಮವಾಗಿ 2.5 ಕೋಟಿ ರುಪಾಯಿ ನಗದನ್ನು ಸಾಗಿಸುತ್ತಿದ್ದ ಕಾರನ್ನು ಶುಕ್ರವಾರ ವಿಧಾನಸೌಧದ ಆವರಣದಲ್ಲಿ ಪೊಲೀಸರು ಜಪ್ತಿ ಮಾಡಿದ್ದು, ಕಾರಿನ ಮಾಲೀಕನನ್ನು ಸಹ ವಶಕ್ಕೆ ಪಡೆಯಲಾಗಿದೆ.
ಇಂದು ಮಧ್ಯಾಹ್ನ 2.30ರ ಸುಮಾರಿಗೆ ಕೆಂಗಲ್ ಹನುಮಂತಯ್ಯ ಗೇಟ್ ಬಳಿ ಹಣ ಸಾಗಿಸುತ್ತಿದ್ದ ವೋಕ್ಸ್ ವ್ಯಾಗನ್ ಕಾರನ್ನು ತಡೆದ ಪೊಲೀಸರು, ಅದರಲ್ಲಿದ್ದ ಹಣವನ್ನು ಹಾಗೂ ಆ ಕಾರಿನ ಮಾಲೀಕ ಧಾರವಾಡ ಮೂಲದ ವಕೀಲ ಸಿದ್ದಾರ್ಥ ಎಂಬುವವರನ್ನು ವಶಕ್ಕೆ ಪಡೆದು ವಿಧಾನಸೌಧದ ಡಿಸಿಪಿ ಕಚೇರಿಯಲ್ಲಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
ಪ್ರಾಥಮಿಕ ತನಿಖೆಯ ವೇಳೆ, ಟೆಂಡರ್ ಸಂಬಂಧ ಈ ಹಣವನ್ನು ಸಚಿವರೊಬ್ಬರಿಗೆ ನೀಡಲು ತರಲಾಗಿತ್ತು ಎಂದು ಪೊಲೀಸ್ ಉನ್ನತ ಮೂಲಗಳು ತಿಳಿಸಿರುವುದಾಗಿ ಖಾಸಗಿ ವಾಹಿನಿಯೊಂದು ವರದಿ ಮಾಡಿದೆ.
ಕೆಂಗಲ್ ಹನುಮಂತಯ್ಯ ಮುಖ್ಯ ದ್ವಾರದ ಮೂಲಕ ವಿಧಾನಸೌಧ ಪ್ರವೇಶಿಸಲು ಮುಂದಾದ KA-04 MM-9018 ಸಂಖ್ಯೆಯ ವೋಕ್ಸ್ವ್ಯಾಗನ್ ಕಾರನ್ನು ರಕ್ಷಣಾ ಸಿಬ್ಬಂದಿ ತಪಾಸಣೆಗೆ ಒಳಪಡಿಸಿದಾಗ ಭಾರೀ ಪ್ರಮಾಣದ ಹಣ ಪತ್ತೆಯಾಗಿದೆ.