ರಾಜ್ಯ

ಶ್ರೀನಿವಾಸ್ ಪ್ರಸಾದ್ ವಿರುದ್ಧ ದ್ವೇಷ ರಾಜಕಾರಣ ಮಾಡಿಲ್ಲ: ಸಿಎಂ ಸಿದ್ದರಾಮಯ್ಯ

Sumana Upadhyaya
ನಂಜನಗೂಡು: ನಾನು ಇವತ್ತಿನವರೆಗೆ ಯಾರನ್ನೂ ಕೀಳಾಗಿ ಕಂಡಿಲ್ಲ. ಎಲ್ಲ ಶಾಸಕರು,ಸಚಿವರನ್ನು ಗೌರವದಿಂದ ಕಂಡಿದ್ದೇನೆ ಮತ್ತು ಕಾಣುತ್ತಿದ್ದೇನೆ. ಹಾಗಾಗಿ ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಇಂದು ಮಾತನಾಡಿದ ಅವರು, ನನಗೆ ಶ್ರೀನಿವಾಸ ಪ್ರಸಾದ್ ಅವರ ಮೇಲೆ ದ್ವೇಷ ಇರುತ್ತಿದ್ದರೆ ಸಚಿವರನ್ನಾಗಿ ಮಾಡುತ್ತಿರಲಿಲ್ಲ. ಅವರು ಮೂರು ವರ್ಷ ಮಂತ್ರಿಯಾಗಿದ್ದರು. ಅವರನ್ನು ನಾನು ಉದ್ದೇಶಪೂರ್ವಕವಾಗಿ ಸಂಪುಟದಿಂದ ಕೈ ಬಿಟ್ಟಿಲ್ಲ. ಹೊಸಬರಿಗೆ, ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡಿದ ಇನ್ನೂ ಅನೇಕ ಹಿರಿಯ ಶಾಸಕರಿಗೆ ಸಚಿವ ಸ್ಥಾನ ದೊರಕಿಸಿಕೊಡಲು ಕೆಲವರನ್ನು ಮಂತ್ರಿಮಂಡಲದಿಂದ ಕೈ ಬಿಡುವುದು ಅನಿವಾರ್ಯವಾಗಿತ್ತು ಎಂದು ಸ್ಪಷ್ಟಪಡಿಸಿದರು.
ನನ್ನನ್ನಾಗಲಿ, ಶ್ರೀನಿವಾಸ ಪ್ರಸಾದ್ ರವರನ್ನಾಗಲಿ ಚುನಾವಣೆಯಲ್ಲಿ ಸೋಲಿಸುವುದು, ಗೆಲ್ಲಿಸುವುದು ಕ್ಷೇತ್ರದ ಮತದಾರರು, ಜನತೆ, ಹಾಗಾಗಿ ಸಿದ್ದರಾಮಯ್ಯನವರನ್ನು ಸೋಲಿಸುವುದೇ ನನ್ನ ಗುರಿ ಎಂದು ಶ್ರೀನಿವಾಸ ಪ್ರಸಾದ್ ರವರು ಹೇಳಿದ್ದರೆ ಅದರಿಂದ ನನಗೆ ಯಾವ ವ್ಯತ್ಯಾಸವೂ ಆಗುವುದಿಲ್ಲ. ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ತೊರೆದದ್ದು ದುರದೃಷ್ಟಕರ ಎಂದಷ್ಟೇ ನಾನು ಹೇಳಲು ಇಚ್ಛಿಸುತ್ತೇನೆ ಎಂದರು.
ಇಂದು ನಂಜನಗೂಡಿನಲ್ಲಿ ಈ ಸಭೆ ಕರೆಯಲು ಕಾರಣ ಯಾವುದೇ ಪ್ರತಿಷ್ಠೆ ತೋರಿಸಿಕೊಳ್ಳುವುದಕ್ಕಲ್ಲ. ಅಥವಾ ಯಾರ ವಿರುದ್ಧವೂ ವೈಯಕ್ತಿಕ ಆರೋಪ ಮಾಡುವುದಕ್ಕಲ್ಲ. ರಾಜ್ಯದ ಜನತೆಗೆ ವಸ್ತುಸ್ಥಿತಿ, ನಿಜ ಸಂಗತಿ ಏನೆಂದು ತಿಳಿಯಲಿ ಎಂದು ನಾನು ಇಂದು ಈ ಮಾತನ್ನು ಹೇಳುತ್ತಿದ್ದೇನೆ. ಪಕ್ಷಕ್ಕೆ ಯಾರೂ ಮುಖ್ಯವಲ್ಲ. ನಮಗೆ ಪಕ್ಷ ಮುಖ್ಯ.ನಾನಿಂದು ಮುಖ್ಯಮಂತ್ರಿಯಾಗಲು ಪಕ್ಷವೇ ಕಾರಣ ಹೊರತು ವೈಯಕ್ತಿಕ ವರ್ಚಸ್ಸು ಅಲ್ಲ ಎಂದು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
SCROLL FOR NEXT